ರಾತ್ರಿಯೇ ಬೆಳಗಾವಿ ಬಿಡಲಿದ್ದಾರೆ ಸಿನಿಮಾ ತಾರೆಗಳು
ವಿಶ್ವಕನ್ನಡ ಸಮ್ಮೇಳನದ ಪ್ರಮುಖ ಆಕರ್ಷಣೆಯಾದ ಕನ್ನಡ ಸಿನಿಮಾ ತಾರೆಗಳನ್ನು ಇಂದು ಬೆಳಗ್ಗೆ ಬೆಳಗಾವಿಗೆ ಬರಮಾಡಿಕೊಳ್ಳಲಾಯಿತು. ಸರಿಸುಮಾರು 1,000ಕ್ಕೂ ಅಧಿಕ ಸಿನಿಮಾ ತಾರೆಗಳು, ತಂತ್ರಜ್ಞರು, ಕಾರ್ಮಿಕರು ವೋಲ್ವೋ ಬಸ್ಗಳಲ್ಲಿ ಬಂದಿಳಿಯುತ್ತಿದ್ದಂತೆ ಸಡಗರ, ಸಂಭ್ರಮ ಮುಗಿಲು ಮುಟ್ಟಿತು.ಅವರು ಬರುವುದು ಕೊಂಚ ತಡವಾದ ಕಾರಣ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇಂದು ರಾತ್ರಿ 9.30ಕ್ಕೆ ಆರಂಭವಾಗುವ ರಸಸಂಜೆ ಕಾರ್ಯಕ್ರಮ ಸತತ 2 ತಾಸುಗಳ ಕಾಲ ಕಲಾರಸಿಕರನ್ನು ಮೈಮರೆಸಲಿದೆ.
ರಸಸಂಜೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಿನಿಮಾ ತಾರೆಗಳು ಬೆಳಗಾವಿ ಬಿಡಲಿದ್ದಾರೆ. ಸಿನಿಮಾ ತಾರೆಗಳು ಎಂದ ಮೇಲೆ ಆಕರ್ಷಣೆ ಇದ್ದದ್ದೆ. ಅವರ ಹಿಂದೆ ಕಲಾರಸಿಕರು ಜನಜಾತ್ರೆ ಸೇರುವುದು, ಕಿರಿಕಿರಿ ಇದ್ದದ್ದೆ. ಹಾಗಾಗಿ ಸಿನಿ ತಾರೆಗಳನ್ನು ಇಂದೇ ಬೆಳಗಾವಿ ಬಿಡಲು ಸೂಚಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ದಟ್ಸ್ಕನ್ನಡಕ್ಕೆ ತಿಳಿಸಿದರು. ಸಮ್ಮೇಳನ ಸಾಂಗವಾಗಿ ನಡೆಯಬೇಕು ಎಂಬ ಸದುದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಹೊರತು ಇನ್ನಾವುದೇ ದುರುದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದಾರಿಯುದ್ದಕ್ಕೂ ಕನ್ನಡ ಹಾಡುಗಳನ್ನು ಹಾಡುತ್ತಾ ಸಮ್ಮೇಳನದ ಸಾತ್ವಿಕ ಸಂದೇಶವನ್ನು ತಲುಪಿಸಲು ಸಿನಿಮಾ ತಾರೆಗಳಿಗೆ ಕೋರಲಾಗಿದೆ.ದಾರಿಯಲ್ಲಿ ಕನ್ನಡ ಜಾಗೃತಿ ಸಭೆಗಳನ್ನು ನಡೆಸುತ್ತಾ ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗ ಮತ್ತು ತುಮಕೂರುಗಳಲ್ಲಿ ವಿಶ್ವಕನ್ನಡ ಸಮ್ಮೇಳನದ ಸಂದೇಶವನ್ನು ಮುಟ್ಟಿಸಲಿದ್ದಾರೆ. ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು, ಆಯಾ ಕ್ಷೇತ್ರದ ಶಾಸಕರು ಸಭೆ ಸಮಾರಂಭಗಳಿಗೆ ವ್ಯವಸ್ಥೆ ಮಾಡಿಕೊಡುತ್ತಿರುವುದು ವಿಶೇಷ.
ಇಂದು ಬೆಳಗಾವಿಗೆ ಬಂದಿಳಿದ ಸಿನಿಮಾ ತಾರೆಗಳಲ್ಲಿ ಪ್ರಮುಖರೆಂದರೆ, ರೆಬೆಲ್ ಸ್ಟಾರ್ ಅಂಬರೀಷ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ವಿಜಯ ರಾಘವೇಂದ್ರ, ದೊಡ್ಡಣ್ಣ, ಮುರಳಿ, ಪ್ರಜ್ವಲ್ ದೇವರಾಜ್, ರಾಘವೇಂದ್ರ ರಾಜ್ ಕುಮಾರ್, ಬಸಂತಕುಮಾರ್ ಪಾಟೀಲ್, ಅಶೋಕ್, ಡಿ ರಾಜೇಂದ್ರ ಬಾಬು, ರಾಜೇಂದ್ರ ಸಿಂಗ್ ಬಾಬು, ಚಿನ್ನೇಗೌಡ ಸೇರಿದಂತೆ ಚಿತ್ರರಂಗದ ಬಹುತೇಕರು ಅತ್ಯುತ್ಸಾಹದಿಂದ ಕಂಡುಬಂದರು.
ನಟಿಯರಲ್ಲಿ ರಾಧಿಕಾ ಪಂಡಿತ್, ಪೂಜಾಗಾಂಧಿ, ಅನು ಪ್ರಭಾಕರ್, ನಿಧಿ ಸುಬ್ಬಯ್ಯ ಜೊತೆಗೆ ಹಳೆ ತಲೆಮಾರಿನ ತಾರೆಗಳಾದ ಸರೋಜಾ ದೇವಿ, ಭಾರತಿ, ಜಯಂತಿ ಕಂಗೊಳಿಸಿದರು. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅನಾರೋಗ್ಯದ ನಿಮಿತ್ತ ಸಮ್ಮೇಳನಕ್ಕೆ ಬರಲು ಸಾಧ್ಯವಾಗಿಲ್ಲ. ಕಾರ್ಯಕ್ರಮ ಮುಗಿದ ಕೂಡಲೆ ಬೆಳಗಾವಿ ಬಿಡಲಿರುವ ತಾರೆಗಳು ಸೋಮವಾರ ಬೆಂಗಳೂರು ತಲುಪಲಿದ್ದಾರೆ.