ಲಗೋರಿ ಚಿನ್ನಿದಾಂಡು ಕುಸ್ತಿಗೆ ಜೈ ಎಂದ ಬೆಳಗಾವಿ
ಹೆಚ್ಚೂ ಕಡಿಮೆ ಮರೆತೇಹೋಗಿರುವ ದೇಶಿಯ ಆಟಗಳಾದ ಚಿನ್ನಿದಾಂಡು ಹಾಗೂ ಲಗೋರಿ ಆಟಗಳನ್ನು ಸಮ್ಮೇಳನದ ನಿಮಿತ್ಯ ಹಮ್ಮಿಕೊಂಡಿರುವುದು ಸಮ್ಮೇಳನದ ಆಕರ್ಷಣೆಗಳಲ್ಲೊಂದು. ಈ ಆಟಗಳು ಈಗಾಗಲೇ ಸರ್ದಾರ್ ಆಟದ ಮೈದಾನದಲ್ಲಿ ಪ್ರಾರಂಭವಾಗಿವೆ. ಸ್ಪರ್ಧೆಯಲ್ಲಿ ಸ್ಥಳೀಯರು ಹೆಚ್ಚಾಗಿ ಪಾಲ್ಗೊಂಡಿದ್ದು, ಸಾರ್ವಜನಿಕರಿಗೆ ವಿಶೇಷ ಮನರಂಜನೆಯಾಗಿದೆ.
ವಿಶ್ವಕನ್ನಡ ಸಮ್ಮೇಳನದ ಪ್ರಸಾರದ ಅನುಕೂಲಕ್ಕಾಗಿ ಸಮ್ಮೇಳನದ ಪ್ರಧಾನ ವೇದಿಕೆಯ ಮಗ್ಗುಲಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದ್ದು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿ ಉಮೇಶ ಕತ್ತಿ, ಸಂಸದರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ ಅವರು ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದರು. ಕಾರ್ಯಕ್ರಮ ನಡೆಯುತ್ತಿದ್ದಂತೆ ಪ್ರತಿ 15 ನಿಮಿಷಗಳಿಗೊಮ್ಮೆ ಸುದ್ಧಿಗಳನ್ನು ಬಿಡುಗಡೆ ಮಾಡಲು ಕ್ರಮಕೈಕೊಳ್ಳಲಾಗಿದೆ.
ಸಾರ್ವಜನಿಕರಿಗೆ ಸಮ್ಮೇಳನದ ವೀಕ್ಷಣೆಯ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯ ವಿಶೇಷ ಬಸ್ಸಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಗಾವಿ ಪ್ರಮುಖ ಬೀದಿಯನ್ನು ಸುಣ್ಣ, ಬಣ್ಣಗಳನ್ನು ಬಳಿದು ಶೃಂಗರಿಸುವ ಕೆಲಸ ಇನ್ನೂ ನಡೆದಿದೆ. ದಾರಿಯುದ್ದೂ ಸ್ವಾಗತ ಕಮಾನುಗಳನ್ನು ಹಾಕಲಾಗಿದ್ದು, ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆರೆದ ಮಹನಿಯರು ಭಾವಚಿತ್ರಗಳನ್ನು ಮುದ್ರಿಸಿರುವುದು ವಿಶೇಷ ಆಕರ್ಷಣೀಯವಾಗಿದೆ. ಇಂದು ಸಂಜೆ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ನಾಳೆ ಮುಂಜಾನೆ ಟಿಳಕವಾಡಿ ವೀರಸೌಧದಿಂದ ಭವ್ಯ ಮೆರವಣಿಗೆ ಹೊರಡಲಿದ್ದು, ಗೃಹ ಖಾತೆ ಸಚಿವ ಆರ್. ಅಶೋಕ ಉದ್ಘಾಟಿಸಲಿದ್ದಾರೆ.