ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ಫಿ ಮೂರ್ತಿ ಏಕೆ?
ಮಾಹಿತಿ ತಂತ್ರಜ್ಞಾನ ಉದ್ಯಮ ಕ್ಷೇತ್ರ ಹೊರತುಪಡಿಸಿದರೆ ನಾರಾಯಣಮೂರ್ತಿ ಕನ್ನಡಕ್ಕೆ ನೀಡಿದ ಡುಗೆಯಾದರೂ ಏನು? ಕನ್ನಡದಲ್ಲಿ ಒಂದೇ ಒಂದು ತಂತ್ರಾಂಶವೂ ಅವರ ಬಹುರಾಷ್ಟ್ರೀಯ ಕಂಪೆನಿಯಿಂದ ಬಂದಿಲ್ಲ ಎಂದು ಬರಗೂರು ರಾಮಚಂದ್ರಪ್ಪ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಆಂಗ್ಲ ಮಾಧ್ಯಮ ಬೇಕೆಂದ ಮೂರ್ತಿ: ಮೊದಲನೆ ತರಗತಿಯಿಂದಲೆ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮ ಇರಬೇಕೆಂದು ನಾರಾಯಣಮೂರ್ತಿ ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಲ್ಲದೆ ತಮ್ಮ ಕಂಪೆನಿಯ ಉದ್ಯೋಗಿಗಳಿಗಾಗಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ, ಶಿಕ್ಷಣ ಮಾಧ್ಯಮ ನಿಯಮವನ್ನೆ ಬದಲಾಯಿಸಲು ಒತ್ತಡ ತಂದು ವಿಫಲರಾದದ್ದು ತಮಗೆ ತಿಳಿದಿದೆ.
ಅಲ್ಲದೆ, ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿ ರಿಯಾಯಿತಿ ಪಡೆದ ಇನ್ಫೋಸಿಸ್ನಿಂದ 450 ಕೋಟಿ ರೂ.ವಸೂಲಿಗೆ ಆದೇಶವಾಗಿರುವುದನ್ನೂ ಸರಕಾರ ಗಮನಿಸಬೇಕು. ಆದುದರಿಂದ, ರಾಯಣಮೂರ್ತಿಯವರಿಂದ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆ ಮಾಡಿಸದೆ, ಅವರನ್ನು ಅತಿಥಿಯಾಗಿ ಆಹ್ವಾನಿಸುವಂತೆ ಬರಗೂರು ರಾಮಚಂದ್ರಪ್ಪ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ನಮ್ಮಲ್ಲಿ ಶ್ರೇಷ್ಠ ಸಾಹಿತಿಗಳಿಲ್ಲವೇ? : ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಅನಂತಮೂರ್ತಿ, ಡಾ.ಗಿರೀಶ್ ಕಾರ್ನಾಡ್, ಹಿರಿಯರಾದ ಪಾಟೀಲ ಪುಟ್ಟಪ್ಪ, ದೇಜಗೌ, ಚಿಮೂ, ಕವಿಗಳಾದ ನಿಸಾರ್ ಅಹ್ಮದ್ ಅವರಲ್ಲಿ ಯಾರನ್ನಾದರೂ ಸಮ್ಮೇಳನದ ಉದ್ಘಾಟನೆ ಮಾಡಲು ಸರಕಾರ ಕೋರಬಹುದಾಗಿತ್ತು.
ಇಲ್ಲದಿದ್ದಲ್ಲಿ, ಒಬ್ಬ ಜನಪದ ಕಲಾವಿದನಿಗೆ ಈ ಅವಕಾಶ ನೀಡುವ ಮೂಲಕ ಕನ್ನಡ ಜನಪದಕ್ಕೆ ಗೌರವ ಸೂಚಿಸಬಹುದಿತ್ತು. ಅದರ ಬದಲು ಕೇವಲ ಉದ್ಯಮಿಯೊಬ್ಬರಿಗೆ ಸಮ್ಮೇಳನ ಉದ್ಘಾಟಿಸಲು ಅವಕಾಶ ನೀಡಿರುವುದು ಕನ್ನಡ ಜನಪದ, ಸಂಸ್ಕೃತಿಗೆ ತೋರಿದ ನಿರ್ಲಕ್ಷ ಹಾಗೂ ಅವಮಾನ ಎಂದು ಎಂದು ಬರಗೂರು ಅಭಿಪ್ರಾಯಪಟ್ಟಿದ್ದಾರೆ. [ಬೆಳಗಾವಿ ಸಮ್ಮೇಳನ ಲೇಖನಗಳು]