ಚಿಮೂಗೆ ಅನ್ಯಾಯವಾಗಿದೆ: ಕ್ಯಾಥೋಲಿಕ್ ಕ್ರೈಸ್ತರು
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕು. ಚಿದಾನಂದ ಮೂರ್ತಿಗಳು ಕನ್ನಡ ನಾಡು ಗೌರವಿಸುವ ವಿದ್ವಾಂಸರು, ರಾಜಕೀಯ ಕಾರಣಕ್ಕೆ ರಾಜ್ಯಪಾಲರು ಅವರಿಗೆ ಡಾಕ್ಟರೇಟ್ ನಿರಾಕರಿಸಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಕ್ರೈಸ್ತ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಚಿದಾನಂದಮೂರ್ತಿ ಕನ್ನಡ ನಾಡು ಗೌರವಿಸುವ ಹಿರಿಯ ವಿದ್ವಾಂಸರು. ಅಧ್ಯಾಪಕರಾಗಿ ಹಲವು ವಿದ್ವಾಂಸರನ್ನು ಸೃಷ್ಟಿಸಿದ್ದಾರೆ. ಎಂದು ಅವರು ಅಭಿ ಪ್ರಾಯಿಸಿದ್ದಾರೆ. ಚಿದಾನಂದ ಮೂರ್ತಿಯವರ ಹಲವು ಅಭಿಪ್ರಾ ಯಗಳನ್ನು ತಾನು ಒಪ್ಪುವುದಿಲ್ಲ. ಚಿದಾನಂದಮೂರ್ತಿ ಯಾವ ವೈಯಕ್ತಿಕ ಲಾಭಕ್ಕಾಗಿ ಹಿಂದುತ್ವದ ಪ್ರತಿಪಾದಕರಾಗಿದ್ದಾರೆಂಬುದು ತನಗೆ ತಿಳಿದಿಲ್ಲ.
ಹಿರಿಯ ವಿದ್ವಾಂಸ ಚಿದಾನಂದ ಮೂರ್ತಿಗಳಿಗೆ ಗೌರವ ಡಾಕ್ಟರೇಟ್ ನಿರಾಕರಿಸಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ವಿಶ್ವವಿದ್ಯಾಲಯದವರು ಸರ್ವಾನುಮತದಿಂದ ಶಿಫಾರಸ್ಸು ಮಾಡಿದ ಮೇಲೂ ರಾಜ್ಯಪಾಲರು ಈ ರೀತಿ ವರ್ತಿಸುತ್ತಿರುವುದು ಅವರ ಪಕ್ಷಪಾತತನವನ್ನು ತೋರಿಸುತ್ತಿದೆ ಎಂದಿದ್ದಾರೆ.
ನನಗೂ ಮೂರ್ತಿಗಳಿಗೂ ಅಭಿಪ್ರಾಯ ಭೇದವಿದೆ ನಿಜ. ಆದರೆ, ಇದು ಕನ್ನಡ ಸಂಶೋಧಕನಿಗೆ ಮಾಡಿದ ಅವಮಾನ. ಚಿದಾನಂದಮೂರ್ತಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಕೊಡುವುದು ತನ್ನನ್ನೇ ತಾನು ಗೌರವಿಸಿ ಕೊಂಡಂತೆ. ಪ್ರಜಾತಂತ್ರದಲ್ಲಿ ಭಿನ್ನ ದೃಷ್ಟಿ ಉಳ್ಳವರು ಪರಸ್ಪರ ಗೌರವದಿಂದ ಇರಬೇಕಾಗಿದೆ. ನಮ್ಮ ಘನವೆತ್ತ ರಾಜ್ಯಪಾಲರು ರಾಜಕೀಯ ಕಾರಣಗಳಿಗಾಗಿ ಚಿದಾನಂದಮೂರ್ತಿ ಯವರಿಗೆ ಗೌರವ ಡಾಕ್ಟರೇಟ್ ನಿರಾಕರಿಸಿರುವುದರಿಂದ ತನಗೆ ಆಘಾತವಾಗಿದೆ ಎಂದು ಯು.ಆರ್.ಅನಂತಮೂರ್ತಿ ಅವರು ಶನಿವಾರ ಸಾಹಿತ್ಯಗೋಷ್ಠಿಯಲ್ಲಿ ಹೇಳಿದರು.
ಗವರ್ನರ್ ಸಮರ್ಥನೆ: ಚಿದಾನಂದ ಮೂರ್ತಿಗಳು ಕೋಮುವಾದಿಗಳು, ಅವರು ಚರ್ಚ್ ದಾಳಿಯನ್ನು ಸಮರ್ಥಿಸಿಕೊಂಡಿದ್ದರು, ಅವರ ಸಂಪೂರ್ಣ ಹಿನ್ನೆಲೆ ತಿಳಿದೇ ಗೌರವ ಡಾಕ್ಟರೇಟ್ ನೀಡಿಕೆಗೆ ತಡೆಯಾಜ್ಞೆ ನೀಡಿದ್ದೇನೆ. ಆ ಅಧಿಕಾರ ನನಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚಿದಾನಂದ ಮೂರ್ತಿ ಹೇಳಿಕೆ: "ನಾನು ಚರ್ಚ್ ದಾಳಿಯನ್ನು ಎಂದೂ ಸಮರ್ಥಿಸಿಲ್ಲ. ಚರ್ಚ್, ದೇಗುಲ, ಮಸೀದಿ ಸೇರಿದಂತೆ ಯಾವುದೇ ಪೂಜಾ ಸ್ಥಳದ ಮೇಲೆ ದಾಳಿ ಸರಿಯಲ್ಲ. ನ್ಯಾ. ಸೋಮಶೇಖರ್ ಆಯೋಗವನ್ನು ಸಮರ್ಥಿಸಿದ್ದೇನೆ. ಗೌರವ ಡಾಕ್ಟರೇಟ್ ತಡೆ ನೀಡಿರುವುದು ಬೇಸರ ತಂದಿದೆ" ಎಂದಿದ್ದಾರೆ.