ಕೊಪ್ಪಳಕ್ಕೆ 78ನೇ ಸಮ್ಮೇಳನ ಒಲಿದಿದ್ದೇಕೆ?
ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಾವೇರಿ, ಬಳ್ಳಾರಿ, ಕೋಲಾರ ಹಾಗೂ ಕೊಪ್ಪಳ ಜಿಲ್ಲೆಗಳ ಪ್ರತಿನಿಧಿಗಳು ತೀವ್ರ ಪೈಪೋಟಿ ನಡೆಸಿದರು. ಕೊನೆಗೆ ಕಲ್ಯಾಣ ಕರ್ನಾಟಕದ ಭಾಗಕ್ಕೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ಬಹುಮತ ಬಂದಿದ್ದರಿಂದ ಪ್ರೊ. ನಲ್ಲೂರು ಅವರು ಗಂಗಾವತಿಯಲ್ಲಿ 78ನೆ ಸಾಹಿತ್ಯ ಸಮ್ಮೇಳನ ಎಂದು ಘೋಷಿಸಿದರು.
ಹಾವೇರಿಯಲ್ಲಿ ಈವರೆಗೆ ಒಮ್ಮೆಯೂ ಸಾಹಿತ್ಯ ಸಮ್ಮೇಳನಜರಗದ ಹಿನ್ನೆಲೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನದ ಆತಿಥೇಯತ್ವ ತಮಗೆ ನೀಡುವಂತೆ ಜಿಲ್ಲೆಯ ಸಾಹಿತ್ಯಾಸಕ್ತರು ಆಗ್ರಹಿಸಿ ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಸಿದರು. ಆದರೆ 24 ಜನರಿದ್ದ ಸಭೆಯಲ್ಲಿ ಹಾವೇರಿ ಪರ ಕೇವಲ 8 ಮತಗಳು ಮಾತ್ರ ಬಿದ್ದವು. ಹೆಚ್ಚಿನ ಮತವನ್ನು ಕೊಪ್ಪಳ ಜಿಲ್ಲೆ ಪಡೆಯಿತು.
2006 ರಲ್ಲಿ ಬೀದರ್ ನಲ್ಲಿ ಸಮ್ಮೇಳನವಾದ ಮೇಲೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವಂಥ ಕನ್ನಡ ಪರ ಸಮ್ಮೇಳನ, ಸಮಾರಂಭಗಳು ನಡೆದಿಲ್ಲ. ಕರ್ನಾಟಕ ಏಕೀಕರಣದ ಹಬ್ಬ ಆಚರಣೆಗೂ ಇದು ವೇದಿಕೆ ಒದಗಿಸಲಿದೆ. 76 ನೇ ಸಾಹಿತ್ಯ ಸಮ್ಮೇಳನ ಗದಗಿನಲ್ಲಿ ನಡೆದಿದ್ದು ಹಾವೇರಿಗೆ ಕೊಂಚ ಮುಳುವಾಯಿತು. ಆದರೆ, ಹಾವೇರಿಯಲ್ಲಿ ಈವರೆಗೆ ಸಮ್ಮೇಳನ ನಡೆದಿಲ್ಲವಾದ್ದರಿಂದ ಈ ಬಾರಿ ಆಯ್ಕೆಯಾಗುವುದು ಖಚಿತ ಎಂದು ಅಲ್ಲಿನ ಮಂದಿ ನಂಬಿದ್ದರು. ಆದರೂ ಎಲ್ಲವೂ ರೆಡ್ಡಿ ಸೋದರರ ಪಾಳೆಯದ ಕಡೆಯ ತಾಣಗಳು ಎಂಬುದು ವಿಶೇಷ.
ಕೊಪ್ಪಳ ಸಾಹಿತ್ಯ ನಂಟು: 1992 ರಲ್ಲಿ ಸಿಂಪಿ ಲಿಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಂತರ ಕೊಪ್ಪಳ ಜಿಲ್ಲಾಕೇಂದ್ರವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳಸುವ ಪ್ರಮುಖ ವೇದಿಕೆಯಾಗಿ ಬೆಳೆಯಿತು.