ಸಮ್ಮೇಳಾನಧ್ಯಕ್ಷರ ಮೆರವಣಿಗೆ ಆರಂಭ
ಸಾರೋಟಿನಲ್ಲಿ ಗೃಹ ಸಚಿವ ಆರ್. ಅಶೋಕ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್, ಮೇಯರ್ ನಟರಾಜ್, ಸಂಸದ ಅನಂತಕುಮಾರ್ ಅವರು ಸಮ್ಮೇಳಾನಧ್ಯಕ್ಷರಿಗೆ ಸಾಥ್ ನೀಡಿದ್ದಾರೆ. ವಿವಿಧ ಕಲಾ ತಂಡಗಳ 500ಕ್ಕೂ ಹೆಚ್ಚು ಕಲಾವಿದರು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲೆಲ್ಲೂ ಕನ್ನಡ ಬಾವುಟ ಎಲ್ಲೆಲ್ಲೂ ರಾರಾಜಿಸುತ್ತಿದೆ.
ಬೆಳಗ್ಗೆ 10.10ಕ್ಕೆ ಕಾರ್ಪೊರೇಷನ್ ವೃತ್ತದಿಂದ ಸಾಗಿರುವ ಮೆರವಣಿಗೆ ಜೆ.ಸಿ. ರಸ್ತೆ, ಮಿನರ್ವ ಸರ್ಕಲ್, ಮಕ್ಕಳ ಕೂಟ, ಪಂಪ ಮಹಾಕವಿ ರಸ್ತೆ ಮೂಲಕ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ನಾಡು ನುಡಿ ಹಬ್ಬ ಸಂಭ್ರಮದಲ್ಲಿ ಪುಳಕಿತಗೊಂಡಿದೆ. ಸಹಸ್ರಾರು ಕನ್ನಡಿಗರು ಮೆರವಣಿಗೆಯಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದಾರೆ.
ಈ ಮಧ್ಯೆ, ಕನ್ನಡ ಚಿತ್ರೋದ್ಯಮದ ಕಾಶಿ ಎನಿಸಿರುವ ಗಾಂಧಿನಗರದ ಸಮೀಪ ಫ್ರೀಂ ಪಾರ್ಕ್ನಿಂದ ಕನ್ನಡ ಚಿತ್ರ ಕಲಾವಿದರು ನ್ಯಾಷನಲ್ ಕಾಲೇಜಿನತ್ತ ಪಥಸಂಚಲನ ನಡೆಸುವ ಮೂಲಕ ಚಿತ್ರೋದ್ಯಮದ ಸಹ ಈ ಬಾರಿ ಸಕ್ರಿಯವಾಗಿ ಪಾಲ್ಗೊಂಡಿದೆ. ಹಿರಿಯ ಕಲಾವಿದ ಅಶೋಕ್ ಅವರು ಇದರ ನೇತೃತ್ವ ವಹಿಸಿದ್ದಾರೆ.