ಕೊಲೆಗಡುಕ ಇಂಗ್ಲಿಷ್ ಭಾಷೆಯಿಂದ ಎಚ್ಚರ!
ಕನ್ನಡ ಸಿನಿಮಾ ಪ್ರಪಂಚವನ್ನು ನೆನೆದಾಗ ಈ ಲೋಕಕ್ಕೇ ಅಪಾಯ ಸಂಭವಿಸುತ್ತ ಇರುವುದು ನನ್ನ ಗಮನಕ್ಕೆ ಬಂದಿದೆ. ಇಷ್ಟು ದಿನಗಳೂ 'ಡಬ್ಬಿಂಗ್" ಎಂಬ ಅವ್ಯವಹಾರದಿಂದ ದೂರವಾಗಿದ್ದು ಸುಖವಾಗಿದ್ದ ಪ್ರಪಂಚಕ್ಕೆ ಈಗ 'ಡಬ್ಬಿಂಗ್" ಮತ್ತೆ ನುಗ್ಗುವ ಪ್ರಯತ್ನ ಮಾಡುತ್ತಿದೆಯಂತೆ. 'ಡಬ್ಬಿಂಗ್" ನಿಜವಾಗಿ ಕಲೇಯೇ ಅಲ್ಲ! ಅದು ಮತ್ತೆ ಕನ್ನಡ ಸಿನಿಮಾ-ದೂರದರ್ಶನಗಳಿಗೆ ತಲೆ ಹಾಕದಂತೆ ಕನ್ನಡಿಗರೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸುತ್ತೇನೆ.
ನಮ್ಮ ಸಮಾಜದಲ್ಲಿರುವ ಶೋಷಿತರ ಬಗ್ಗೆ ಒಂದು ಸಂಗತಿಯನ್ನು ಎಲ್ಲರ ಗಮನಕ್ಕೆ ತರಲು ಉದಾಹರಣೆಯನ್ನು ನೀಡುತ್ತೇನೆ. ೧೯೭೨ರಲ್ಲಿ ನಮ್ಮ ರಾಜ್ಯದ ಮಂತ್ರಿಮಂಡಲದಲ್ಲಿ ಜನಪ್ರಿಯ ಮಂತ್ರಿಯಾಗಿದ್ದ ಬಸವಲಿಂಗಪ್ಪನವರು ಕೈಗೊಂಡ ಒಂದು ತೀರ್ಮಾನ ಎಲ್ಲ ಪ್ರಜೆಗಳ ಮನಸ್ಸಿಗೆ ಸಂತೋಷವನ್ನು ಉಂಟುಮಾಡಿತು. ಶೋಷಿತವರ್ಗದ ಒಂದು ಪಂಗಡದವರು ಮಾನವ ಮಲವನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿದ್ದರು. ಈ ಅಭ್ಯಾಸವು ಕೂಡಲೇ ನಿಲ್ಲಬೇಕೆಂದು ಆದೇಶ ಜಾರಿಗೆ ಬಂತು. ಮಾನವ ಹಕ್ಕುಗಳನ್ನು ಚಾಲ್ತಿಗೆ ತಂದ ತೀರ್ಮಾನವಾಗಿತ್ತು ಅದು. ಈ ಆದೇಶವು ಬಂದು ಸುಮಾರು ನಲವತ್ತು ವರ್ಷಗಳಾಗಿವೆ.
ಈಚೆಗೆ ಕರ್ನಾಟಕ ಪ್ರದೇಶದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್. ನಾಯಕ್ ಅವರು, 2010 ರ ಜುಲೈ ತಿಂಗಳಲ್ಲಿ ಬರೆದ ಲೇಖನದಲ್ಲಿ, ಸವಣೂರಿನಲ್ಲಿ ಅತಿ ಶೋಷಿತವರ್ಗದವರು ತಮ್ಮ ತಲೆಯ ಮೇಲೆ ಮಾನವ ಮಲವನ್ನು ಕದಡಿದ ನೀರಿನಿಂದ ಅಭಿಷೇಕ ಮಾಡಿಕೊಂಡು ಬಂಡಾಯವನ್ನು ನಡೆಸಿದ ಬಗ್ಗೆ ಬರೆದಿದ್ದರು. ಈ ವಿಚಾರದ ಬಗ್ಗೆ ೨೦೦೮ರಲ್ಲಿಯೇ ಸರಕಾರಕ್ಕೆ ಈ ಭಂಗಿ ಪದ್ಧತಿಯನ್ನು ನಿಲ್ಲಿಸಲು ಏರ್ಪಾಡು ಮಾಡಬೇಕೆಂದು ತಿಳಿಸಿ ಪತ್ರವನ್ನು ಬರೆದಿದ್ದನ್ನು ಉಲ್ಲೇಖಿಸಿದ್ದಾರೆ. ಆದರೆ ಏನೂ ಆಗಲಿಲ್ಲವೆಂದು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಹೀಗಿದ್ದೂ ಇಂಥ ಅತಿ ಅಮಾನವೀಯವಾದ ಈ ಪದ್ಧತಿಯನ್ನು ನಿಲ್ಲಿಸುವ ಒಂದು ಕಾರ್ಯವನ್ನು ಯಾವ ಪಕ್ಷ ಮಾಡಿದ್ದರೂ ಅದರ ಕೀರ್ತಿ ಆಕಾಶಕ್ಕೇರುತ್ತಿತ್ತು. ಎಂಥ ಅವಕಾಶವನ್ನು ನಮ್ಮ ಶಾಸಕರು ಕಳೆದುಕೊಂಡರಲ್ಲ ಎಂದು ವ್ಯಥೆಯಾಗುತ್ತದೆ. ನಮ್ಮ ಕೇಂದ್ರ ಸರಕಾರವು ವಿಶ್ವಸಂಸ್ಥೆಯ ಸಾರ್ವಜನಿಕ ಸಭೆಗೆ ವರದಿಯನ್ನು ಕಳಿಸುವಾಗ ನಮ್ಮ ದೇಶದಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಲಾಗಿದೆ ಎಂದೇ ಕಳಿಸುತ್ತದೆ. ಎಂಥ ವಿಪರ್ಯಾಸ. ನಾವೆಲ್ಲ ಸಾಮಾನ್ಯರಲ್ಲಿ ಸಾಮಾನ್ಯರಾದ ಜನತೆ. ಶಾಸಕರಿಗೆ ಏನು ಹೇಳಬಹುದು?
ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟವಾದ ರಾಜ್ಯ ಎಂಬ ಹೆಸರನ್ನು ಸಂಪಾದಿಸಿಬಿಟ್ಟಿದೆ. ಭಾರತದ ಸಂವಿಧಾನವು ಒಂದು ಉತ್ಕೃಷ್ಟ ರಾಜ್ಯಧರ್ಮಶಾಸ್ತ್ರದಂತೆ ಇದೆ ಎಂದು ಹೆಸರು ಪಡೆದಿದೆ. ಹೀಗಿದ್ದೂ ಅದನ್ನು ತಿರಸ್ಕರಿಸಿ ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ. ಬಯ್ಗಳು ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು. ಹಲವು ಶಾಸಕರ ಮಾತಿನಲ್ಲಿ, ನಡೆಯಲ್ಲಿ, ವ್ಯವಹಾರದಲ್ಲಿ, ಯಾವುದರಲ್ಲಿಯೂ ಗಾಂಭೀರ್ಯವಾಗಲಿ, ಸುಸಂಸ್ಕೃತಿಯಾಗಲಿ ಕಾಣಬರುತ್ತಿಲ್ಲ. ಪ್ರಜಾವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಮಾಧಾನ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂಥ ಅಸಮರ್ಥರನ್ನು ಶಾಸಕರನ್ನಾಗಿ ಮಾಡಿದೆವು ಎಂದು ತಮ್ಮನ್ನೂ ಎಲ್ಲ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡಿದರೆ ಎಂಥ ವಿಪರ್ಯಾಸ.
ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ಒಂದು ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದೃಶ್ಯ, ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರಿದಿದೆ. ನಮಗೆ ಇದು ದುರಂತ. ಇತರ ಪ್ರಾಂತಗಳವರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಇನ್ನೂ ಕ್ಲೆ ಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ ತಲುಪಬಹುದು. ಇನ್ನು ಡಿನೂಮೆಂಟ್ ಎಂಬ ಪರಿಣಾಮ ಏನಾಗುತ್ತದೋ ಯಾರು ಬಲ್ಲರು. ಕಾದು ನೋಡೋಣ. ನಾವೇನು ತಾನೇ ಮಾಡಬಹುದು?
ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ. ಪ್ರಜೆಗಳಾದ ನಾವು ಇಂಥ ವರ್ಗದಿಂದ ಬೇರೆಯಾಗಿ
ತಲೆತುಂಬ
ಕಲಿಯೋಣ
ತಲೆ
ಎತ್ತಿ
ನುಡಿಯೋಣ
ತಲೆಬಾಗಿ
ಬಾಳೋಣ
ಸಿರಿಗನ್ನಂಡಗೆಲ್ಗೆ
-
ಜಿ.
ವೆಂಕಟಸುಬ್ಬಯ್ಯ,
ಬೆಂಗಳೂರು
04-102-2011
« ಸಮ್ಮೇಳನಾಧ್ಯಕ್ಷ ಜಿವಿ ಭಾಷಣದ ಪೂರ್ಣಪಾಠ