ಕನ್ನಡಕ್ಕಾಗಿ ಕೈಎತ್ತಿದ ಐಪಿಎಸ್, ಐಎಎಸ್ ಅಧಿಕಾರಿಗಳು
ಫೆ.4ರಿಂದ 6ರ ವರೆಗೆ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
ಕಸಾಪ ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ್ ಮತ್ತು ಗೃಹ ಸಚಿವ ಅಶೋಕ್ ನೇತೃತ್ವದಲ್ಲಿ ಪರಿಷತ್ ಸದಸ್ಯರು ಶುಕ್ರವಾರ (ಜ.28) ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮ್ಮೇಳನದ ಅಧಿಕೃತ ಆಮಂತ್ರಣ ನೀಡಿದರು. ಕೊರತೆಯಾಗಲಿರುವ ಹಣಕಾಸು ತುಂಬಿಕೊಡಲು ಮನವಿ ಮಾಡಿದಾಗ ಸಿಎಂ ತಕ್ಷಣ 50 ಲಕ್ಷ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ. ಬಿಡಿಎ ಐವತ್ತು ಲಕ್ಷ ನೀಡುವುದಾಗಿ ಭರವಸೆ ನೀಡಿದೆ ಎಂದು ನಲ್ಲೂರು ಪ್ರಸಾದ್ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಕಳೆದ ಕೆಲವು ಸಮ್ಮೇಳನದಿಂದ ಆಯಾ ಜಿಲ್ಲೆಯಲ್ಲಿರುವ ಐಎಎಸ್, ಕೆಎಎಸ್ ಶ್ರೇಣಿಯ ಅಧಿಕಾರಿಗಳು ಒಂದು ದಿನದ ವೇತನವನ್ನು ನೀಡಬೇಕೆಂಬ ಕೋರಿಕೆ ಕೇಳಿಬಂದಿತ್ತು. ಆದರೆ ಜಿಲ್ಲಾ ಮಟ್ಟದಲ್ಲಿ ಈ ಶ್ರೇಣಿಯ ಹೆಚ್ಚಿನ ಅಧಿಕಾರಿಗಳು ಇಲ್ಲದಿದ್ದರಿಂದ ಅವರ ಒಂದು ದಿನದ ವೇತನವು ಅಷ್ಟಾಗಿ ಲೆಕ್ಕಕ್ಕೆ ಬರುತ್ತಿರಲಿಲ್ಲ.
ಆದರೆ ಈಗ ರಾಜಧಾನಿ ಬೆಂಗಳೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಇಲ್ಲಿ ಹೆಚ್ಚುಕಮ್ಮಿ ಐಎಎಸ್ ಶ್ರೇಣಿಯ ಅಧಿಕಾರಿಗಳು ನೂರರಷ್ಟಿದ್ದಾರೆ. ಕೆಎಎಸ್ ಅಧಿಕಾರಿಗಳ ಸಂಖ್ಯೆ 200-300ರಷ್ಟಿದೆ. ಹಾಗಾಗಿ ಇವರೆಲ್ಲರ ಒಂದು ದಿನದ ವೇತನ ದೊಡ್ಡ ಮೊತ್ತವಾಗಿ ಸಮ್ಮೇಳನದ ಯಶಸ್ಸಿಗೆ ಸಹಕಾರಿಯಾಗಲಿದೆ. ಹಣಕಾಸು ಸಮಿತಿ ಸಂಚಾಲಕರಾಗಿರುವ ಎಲ್. ಬೈರಪ್ಪ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳ ಸಂಘದ ಜತೆ ಮಾತುಕತೆ ನಡೆಸಿದ್ದಾರೆ ಮತ್ತು ಅಧಿಕಾರಿಗಳು ಸಂತೋಷದಿಂದ ಒಂದು ದಿನದ ವೇತನ ನೀಡಲು ಒಪ್ಪಿಗೆ ಸೂಚಿಸಿದ್ದಾರೆಂದು ನಲ್ಲೂರು ಪ್ರಸಾದ್ ಹೇಳಿಕೆ ನೀಡಿದ್ದಾರೆ. [ಕನ್ನಡ ಸಾಹಿತ್ಯ ಸಮ್ಮೇಳನ]