ಈ ಬಾರಿ ಸಮ್ಮೇಳನದ ಊಟದ ಮೆನು
ಊಟೋಪಚಾರದಲ್ಲಿ ಸರಳತೆ ಎಂದರೆ ವಿಶೇಷ ಭಕ್ಷ್ಯಗಳಿಗೆ ಕಡಿವಾಣ ಬೀಳಲಿದೆ. ತಿನಿಸುಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗುತ್ತದೆ. ಆದರೆ, ಎಲ್ಲರಿಗೂ ಊಟ ವ್ಯವಸ್ಥಿತ ರೀತಿಯಲ್ಲಿ ಸಿಗುವ ಏರ್ಪಾಟು ಮಾಡಲಾಗಿದೆ. ಊಟದ ಮೆನು ಈಗಲೇ ನೆನಪಿಟ್ಟುಕೊಳ್ಳಿ. ಕಡಕ್ ಜೋಳದ ರೊಟ್ಟಿ, ಮೆತ್ತನೆ ರೊಟ್ಟಿ, ಒಗ್ಗರಣೆ ಗಿರ್ಮಿಟ್, ಚಪಾತಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಹೆಸರು ಕಾಳು ಪಲ್ಯ, ಮುಳುಗಾಯಿ, ಎಣಗಾಯಿ, ಗೋಧಿ ಹುಗ್ಗಿ, ಶೇಂಗಾ ಗುರೆಳ್ಳು, ಪುಟಾಣಿ ಚಟ್ನಿ, ಮಿರ್ಚಿ ಬಜ್ಜಿ, ಚುರುಮುರಿ, ಮಾದಲಿ ಕೆಂಪುಕಾರ ಮತ್ತು ಬೆಣ್ಣೆ. ಜೊತೆಗೆ ನೀರು ಮಜ್ಜಿಗೆಯಂತೂ ಇದ್ದೇ ಇರುತ್ತದೆ.
ಊಟದ ವ್ಯವಸ್ಥೆ ಗೊಂದಲ ನಿವಾರಣೆ: ಪ್ರತಿ ಬಾರಿ ಸಮ್ಮೇಳನಗಳಲ್ಲಿ ಊಟದ ವೇಳೆಗೆ ಹಾತೊರೆಯುತ್ತಾ, ಶಿಸ್ತು ಉಲ್ಲಂಘಿಸಿ ಮಂದಿಯಿಂದ ರಾದ್ಧಾಂತ ಸೃಷ್ಟಿಯಾಗುತ್ತಿದ್ದದ್ದು ಸಾಮಾನ್ಯ. ವ್ಯವಸ್ಥಾಪಕರಿಗಂತೂ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡುವುದು ಸವಾಲಿನ ಕೆಲಸವೇ ಸೈ. ಈ ಬಾರಿ ಸಮ್ಮೇಳನದ ಉಸ್ತುವಾರಿಯನ್ನು ಶ್ರೀರಾಮುಲು ವಹಿಸಿದ್ದು, ಬಳ್ಳಾರಿ ಸಚಿವರುಗಳಿಗೆ ಇದು ಪ್ರತಿಷ್ಠೆಯ ವಿಷಯವಾಗಿದೆ. ಅಲ್ಲದೆ, ಸಾಮೂಹಿಕ ಮದುವೆ, ಜಾತ್ರೆ ಮುಂತಾದ ಅನೇಕಾನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡ ಬಂದ ಇತಿಹಾಸ ಹೊಂದಿರುವ ರೆಡ್ಡಿ ಸೋದರರು, ಈ ಬಾರಿ ಕೂಡ ಜನಮೆಚ್ಚುಗೆ ಗಳಿಸುತ್ತಾರೆ ಎಂಬುದು ಎಲ್ಲರ ವಿಶ್ವಾಸ.
ಸಿದ್ಧತೆ ಹೀಗೆ ನಡೆದಿದೆ:ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ಜಿಲ್ಲೆಯ ನಾಲ್ಕು ಮಂದಿ ಶಾಸಕರಿಗೆ ವಹಿಸಲಾಗಿದೆ. ಪ್ರತಿಯೊಬ್ಬ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ತಲಾ 25 ಕ್ವಿಂಟಾಲ್ ರೊಟ್ಟಿ ಮತ್ತು 4 ಕ್ವಿಂಟಾಲ್ ಶೇಂಗಾ ಚಟ್ನಿ ಮಾಡಿಸಿಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಊಟದಲ್ಲಿ ಸರಳತೆ ಇದೆಯಾದರೂ ಆತಿಥ್ಯದಲ್ಲಿ ಯಾವುದೇ ಲೋಪಗಳಾಗದಂತೆ ಸಮಿತಿ ಎಚ್ಚರವಹಿಸಲಿದೆ. ಊಟದಲ್ಲಿ ಯಾವುದೇ ನೂಕು ನುಗ್ಗಲು ಹಾಗೂ ಗಲಾಟೆ ಆಗುವುದನ್ನು ತಪ್ಪಿಸಲು ಮೂರು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಗಣ್ಯರು ಮತ್ತು ಅಧಿಕಾರಿಗಳಿಗೆ ಗದಗದ ಎಪಿಎಂಸಿ ಯಾರ್ಡ್, ಸಾಹಿತಿಗಳು ಮತ್ತು ಅತಿಥಿಗಳಿಗೆ ಕೆ.ಹೆಚ್. ಪಾಟೀಲ್ ಸಭಾ ಭವನ, ಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗೆ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ಊಟದ ಏರ್ಪಾಡು ಮಾಡಲಾಗಿದೆ. ಊಟದ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗ ಬಾರದೆಂದು ಸಾರ್ವಜನಿಕರನ್ನು ಹೊರತುಪಡಿಸಿ ಪ್ರತಿನಿಧಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ.