ಯುಪಿ ಫಿರೋಜಾಬಾದ್ನಲ್ಲಿ ಡೆಂಗ್ಯೂ, ವೈರಲ್ ಜ್ವರ ಮತ್ತಷ್ಟು ಹೆಚ್ಚಳ: ಪೂರ್ವದಲ್ಲೂ ಆತಂಕ
ಲಕ್ನೋ, ಸೆಪ್ಟೆಂಬರ್ 06: ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಡೆಂಗ್ಯೂ ಹಾಗೂ ವೈರಲ್ ಜ್ವರದ ಪ್ರಕರಣಗಳು ದಿನ ಕಳೆದಂತೆ ಏರಿಕೆಯಾಗುತ್ತಿದೆ. ಭಾನುವಾರ ಒಂದು ದಿನವೇ 105 ಮಂದಿ ಡೆಂಗ್ಯೂ ಹಾಗೂ ವೈರಲ್ ಜ್ವರದ ರೋಗಿಗಳು ಉತ್ತರ ಪ್ರದೇಶದ ಫಿರೋಜಾಬಾದ್ನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದಾರೆ. ಈ ಆಸ್ಪತ್ರೆಯಲ್ಲೇ ಈವರೆಗೆ ಸುಮಾರು 51 ಮಂದಿ ಡೆಂಗ್ಯೂ ಅಥವಾ ವೈರಲ್ ಜ್ವರದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಮಾತ್ರ ಯಾವುದೇ ಸಾವು ವರದಿಯಾಗಿಲ್ಲ.
ಈ ನಡುವೆ ಬೇಜಾಬ್ದಾರಿ ತೋರಿದ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಈ ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕಿ ಡಾ. ಸಂಗೀತ ಅನೇಜಾ, "ಇಂದು ಡೆಂಗ್ಯೂ ಹಾಗೂ ವೈರಲ್ ಜ್ವರದ 105 ಪ್ರಕರಣಗಳು ವರದಿಯಾಗಿದೆ. ಈ ಸಂದರ್ಭದಲ್ಲಿ 60 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ," ಎಂದು ತಿಳಿಸಿದ್ದಾರೆ.
ಡೆಂಗ್ಯೂ ಶಂಕೆ: ಯುಪಿಯ ಫಿರೋಜಾಬಾದ್ನಲ್ಲಿ ಕಳೆದ ಹತ್ತು ದಿನದಲ್ಲೇ 45 ಮಕ್ಕಳು ಸಾವು
ಇನ್ನು "ಈವರೆಗೆ ವಿವಿಧ ವಾರ್ಡ್ಗಳಲ್ಲಿ ಸುಮಾರು 447 ರೋಗಿಗಳು ದಾಖಲಾಗಿದ್ದಾರೆ," ಎಂದು ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕಿ ಡಾ. ಸಂಗೀತ ಅನೇಜಾ ಮಾಹಿತಿ ನೀಡಿದ್ದಾರೆ. "ಈವರೆಗೆ ಸುಮಾರು 51 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವ ಮಕ್ಕಳು ಕೂಡಾ ಸಾವನ್ನಪ್ಪಿಲ್ಲ, ಇದು ಆಶಾದಾಯಕ ವಿಚಾರ," ಎಂದಿದ್ದಾರೆ.
ಪಂಚಾಯತ್ ಅಧಿಕಾರಿ ಅಮಾನತು
ಈ ನಡುವೆ ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಮಸ್ತೇನ ಗ್ರಾಮದ ಪಂಚಾಯತ್ ಅಭಿವೃದ್ದಿ ಅಧಿಕಾರಿ ದೀಪಕ್ ಯಾದವ್ರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಗ್ರಾಮದಲ್ಲಿ ಈ ರೀತಿಯಾಗಿ ಡೆಂಗ್ಯೂ ಹಾಗೂ ವೈರಲ್ ಜ್ವರದ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಜವಾಬ್ದಾರಿಯುತವಾಗಿ ವರ್ತಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ನೋಡಲ್ ಅಧಿಕಾರಿಯಿಂದ ಗ್ರಾಮಕ್ಕೆ ಭೇಟಿ
ಸುಧಾಮ ನಗರ ಹಾಗೂ ಐಲಾನ್ ನಗರ ಸೇರಿದಂತೆ ಡೆಂಗ್ಯೂ ಹಾಗೂ ವೈರಲ್ ಜ್ವರ ಕಾಣಿಸಿಕೊಂಡಿರುವ ಹಲವಾರು ಪ್ರದೇಶಗಳಿಗೆ ನೋಡಲ್ ಅಧಿಕಾರಿ ಸುಧೀರ್ ಕುಮಾರ್ ಬೋಬ್ಡೆ ಭೇಟಿ ನೀಡಿದರು. ನೋಡಲ್ ಅಧಿಕಾರಿ ಸುಧೀರ್ ಕುಮಾರ್, ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಯೋಗ ಕ್ಷೇಮ ವಿಚಾರಿಸಿದರು. ಹಾಗೆಯೇ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ಜನರು ತಿಳಿಸಬೇಕು, ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯಬೇಕು ಎಂದು ಜನರಿಗೆ ನೋಡಲ್ ಅಧಿಕಾರಿ ಸುಧೀರ್ ಕುಮಾರ್ ತಿಳಿಸಿದರು. ಹಾಗೆಯೇ ಜನರು ಅಲ್ಲಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಸೂಚಿಸಿದರು. ನೀರು ನಿಂತಿದ್ದರೆ ನೀರು ತೆಗೆದು ಆ ಪ್ರದೇಶವನ್ನು ಶುಚಿಗೊಳಿಸಿ ಎಂದು ಹೇಳಿದರು. ತಮ್ಮ ಮನೆಯನ್ನು ಹಾಗೂ ಸುತ್ತ ಮುತ್ತಲಿನ ಪ್ರದೇಶವನ್ನು ಶುಚಿಯಾಗಿ ಇರಿಸಿಕೊಳ್ಳುವುದು ಮಾತ್ರವಲ್ಲದೇ ಬೇರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಉತ್ತರ ಪ್ರದೇಶದ ಪೂರ್ವ ಭಾಗಕ್ಕೂ ಹರಡಿದ ಡೆಂಗ್ಯೂ, ವೈರಲ್ ಜ್ವರದ ಭೀತಿ!
ಆಸ್ಪತ್ರೆಯಲ್ಲಿ ಬೆಡ್ ಕೊರತೆ, ಕಳಪೆ ಔಷಧಿ ಆರೋಪ
ಈ ಮಧ್ಯೆ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಮುಖ್ಯಸ್ಥ ಶಿವ್ಪಾಲ್ ಸಿಂಗ್ ಯಾದವ್ ಕೂಡಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದು ರೋಗಿಗಳ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. "ಪ್ರತಿದಿನ ಸುಮಾರು 200 ರಷ್ಟು ಡೆಂಗ್ಯೂ ರೋಗಿಗಳು ಹಾಗೂ ವೈರಲ್ ಜ್ವರದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ," ಎಂದು ಹೇಳಿದ್ದಾರೆ. "ರೋಗಿಗಳು ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಹಿನ್ನೆಲೆ ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆಯೂ ಕಾಣಿಸಿಕೊಂಡಿದೆ. ರೋಗಿಗಳಿಗೆ ನೀಡಲಾಗುತ್ತಿರುವ ಔಷಧೀಯು ಉತ್ತಮ ಗುಣಮಟ್ಟದ್ದು ಅಲ್ಲ," ಎಂದು ಆರೋಪ ಮಾಡಿದ್ದಾರೆ.
ಪೂರ್ವ ಉತ್ತರ ಪ್ರದೇಶದಲ್ಲೂ ಹರಡಿದ ಡೆಂಗ್ಯೂ, ವೈರಲ್ ಜ್ವರ
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಂಡ ಈ ಡೆಂಗ್ಯೂ ಹಾಗೂ ವೈರಲ್ ಜ್ವರ ಈಗ ಉತ್ತರ ಪ್ರದೇಶ ರಾಜ್ಯದ ಪೂರ್ವ ಭಾಗದಲ್ಲೂ ಹರಡಿದೆ. ಬಲ್ಲಿಯಾ ಪ್ರದೇಶದಲ್ಲಿ ಸುಮಾರು ಶೇಕಡ 25 ರಷ್ಟು ವೈರಲ್ ಜ್ವರ ಪ್ರಕರಣಗಳು ಏರಿಕೆ ಕಂಡಿದೆ. ಅದು ಕೂಡಾ ಕಳೆದ ಹತ್ತು ದಿನದಲ್ಲೇ ಈ ರೀತಿಯಾಗಿ ಏರಿಕೆ ಕಂಡಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ಹೇಳಿದ್ದಾರೆ. "ಮಕ್ಕಳ ವಾರ್ಡ್ ಸಂಪೂರ್ಣವಾಗಿ ರೋಗಿಗಳಿಂದ ತುಂಬಿ ಹೋಗಿದೆ," ಎಂದು ಮೆಡಿಕಲ್ ಆಸ್ಪತ್ರೆಯ ಅಧಿಕಾರಿ ಡಾ. ವಿ ಪಿ ಸಿಂಗ್ ಹೇಳಿದ್ದಾರೆ. ಪ್ರಯಾಗ್ ರಾಜ್ನಲ್ಲಿ ಮೋತಿ ಲಾಲ್ ನೆಹರು ಆಸ್ಪತ್ರೆಯಲ್ಲಿ 170 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ಪೈಕಿ ಹಲವು ಮಕ್ಕಳಿಗೆ ಆಕ್ಸಿಜನ್ನ ಅಗತ್ಯವಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯು ಹೇಳಿದೆ. ಪ್ರಯಾಗ್ ರಾಜ್ನಲ್ಲಿ ಈವರೆಗೆ 30 ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ.
(ಒನ್ ಇಂಡಿಯಾ ಸುದ್ದಿ)