ರಾಜ್ ಕೋಟ್, ಡಿ.29: ವಿಶ್ವಕಪ್ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡದೆ ಕಡೆಗಣಿಸಿದ್ದರಿಂದ ನೋವುಂಡಿರುವ ಎಡಗೈ ಆಟಗಾರ ಯುವರಾಜ್ ಸಿಂಗ್ ಎದೆಯೊಳಗಿನ ಕಿಚ್ಚು ಇನ್ನೂ ಆರಿದಂತೆ ಕಾಣುತ್ತಿಲ್ಲ. ಸತತ ಎರಡು ಶತಕ ಗಳಿಸಿದ ಯುವರಾಜ್ ಸೋಮವಾರ ಮೂರನೇ ಶತಕ ಬಾರಿಸಿ ತಮ್ಮ ಲಯವನ್ನು ಮುಂದುವರೆಸಿದ್ದಾರೆ.
ಎಡಗೈ ಬ್ಯಾಟ್ಸ್ ಮನ್, ವಿಶ್ವಕಪ್ ವೀರ ಯುವರಾಜ್ ಸಿಂಗ್ ಸತತ ಮೂರು ಶತಕ ಸಿಡಿಸುವ ಮೂಲಕ ಇನ್ನೂ ಕಳೆಗುಂದಿಲ್ಲ ಎಂದು ಸಾಬೀತು ಮಾಡಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಪಂಜಾಬ್ ಪರ ಆಡುವ ಯುವರಾಜ್ ಸಿಂಗ್ ಸೋಮವಾರ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ.ಪ್ರಸಕ್ತ ರಣಜಿ ಋತುವಿನ ಮೂರು ಪಂದ್ಯಗಳಿಂದ 400ಕ್ಕೂ ರನ್ ಕಲೆ ಹಾಕಿದ್ದಾರೆ. [ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]
33 ವರ್ಷ ವಯಸ್ಸಿನ ಯುವರಾಜ್ ಸಿಂಗ್ 2015-15ರ ರಣಜಿಯ ಮೊದಲ ಪಂದ್ಯದಲ್ಲಿ ಹರ್ಯಾಣ ವಿರುದ್ಧ 130, ಮಹಾರಾಷ್ಟ್ರ ವಿರುದ್ಧ 136 ರನ್ ಗಳಿಸಿದ್ದರು. ವಿಶ್ವಕಪ್ ಸಂಭಾವ್ಯ 30 ಸದಸ್ಯರ ತಂಡದಿಂದ ಯುವರಾಜ್ ಸಿಂಗ್ ರನ್ನು ಹೊರ ಹಾಕಿದ ಬೆನ್ನಲ್ಲೇ ಬಿಸಿಸಿಐ ತನ್ನ ಗುತ್ತಿಗೆ ಪಟ್ಟಿಯಿಂದಲೂ ಯುವರಾಜ್ ರನ್ನು ಹೊರಕ್ಕೆ ಹಾಕಿತ್ತು.
ಟೀಂ ಇಂಡಿಯಾ ಪರ ಡಿಸೆಂಬರ್ 11, 2013ರಂದು ಯುವರಾಜ್ ಸಿಂಗ್ ಕೊನೆ ಏಕದಿನ ಕ್ರಿಕೆಟ್ ಪಂದ್ಯವಾಡಿದ್ದರು. ಇದಾದ ಮೇಲೆ ಕಳೆದ ಏಪ್ರಿಲ್ ನಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ಭಾರತದ ಜರ್ಸಿ ಧರಿಸಿದ್ದರು. [30 ಮಂದಿ ಟೀಂ ಇಂಡಿಯಾ ಪ್ರಕಟ]