ಚಂಡಿಗಢ, ಜ. 7 : ಹಿಂದಿನ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರನ್ನು ಈ ಬಾರಿಯ ವಿಶ್ವಕಪ್ ನಿಂದ ಕೈಬಿಟ್ಟಿರುವುದಕ್ಕೆ ಯುವರಾಜ್ ತಂದೆ ಯೋಗರಾಜ್ ಸಿಂಗ್ ಪ್ರತಿಕ್ರಯೆ ನೀಡಿದ್ದಾರೆ.
ಯುವರಾಜ್ ಇಂಥ ಘಟನೆಗಳಿಂದ ಬೇಸರ ಮಾಡಿಕೊಳ್ಳುವುದಿಲ್ಲ. ಆತ ಮಂಜುಗಡ್ಡೆಯಂತೆ ಕರಗುವುದಿಲ್ಲ. ಇಂಥ ಅಲೆಗಳನ್ನು ಆತ ಜೀವನದಲ್ಲೇ ಸಾಕಷ್ಟು ಕಂಡಿದ್ದಾನೆ. ಆತ ದೇಶಿ ಕ್ರಿಕೆಟ್ ನಲ್ಲಿ ಇನ್ನು ಉತ್ತಮ ಆಟ ಪ್ರದರ್ಶನ ಮಾಡಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ಬಿನ್ನಿ ಆಯ್ಕೆ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ]
'ನೀವು ಯಾವುದೇ ಚಿಂತೆ ಮಾಡಬೇಡಿ, ನನ್ನ ಅಭ್ಯಾಸ ಮತ್ತು ವಿಶ್ವಾಸಕ್ಕೆ ಈ ಘಟನೆ ಅಡ್ಡಬರಲ್ಲ' ಎಂದು ಯುವರಾಜ್ ನನಗೆ ಮೆಸೇಜ್ ಮಾಡಿದ್ದಾನೆ. ಆತ ಜೀವನದಲ್ಲಿ ಏಳು ಬೀಳುಗಳನ್ನು ಕಂಡಿದ್ದು ಇದರಿಂದ ನೊಂದುಕೊಳ್ಳುವುದಿಲ್ಲ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಆತ ಒಬ್ಬ ಕ್ರಿಕೆಟರ್ ಆಗಿ ವಿಶ್ವದ ಜನರ ಪ್ರೀತಿ ಗಳಿಸಿದ್ದಾನೆ. ಕ್ಯಾನ್ಸರ್ ನಂಥ ಮಾರಕ ಕಾಯಿಲೆಯನ್ನೇ ಗೆದ್ದು ಮತ್ತೊಮ್ಮೆ ದೇಶಕ್ಕಾಗಿ ಆಡಿದ್ದಾನೆ. ಸದ್ಯದ ಬೆಳವಣಿಗೆಗಳಳು ಮೇಲ್ನೋಟಕ್ಕೆ ನೋವು ತಂದಿದ್ದರೂ ಆತನ ಕ್ರಿಕೆಟ್ ಜೀವನದ ಮೇಲೆ ಯಾವ ಪರಿಣಾಮ ಉಂಟುಮಾಡಲ್ಲ ಎಂದು ತಿಳಿಸಿದ್ದಾರೆ.[ರಾಹುಲ್ ದ್ರಾವಿಡ್ ಕನಸಿನ ತಂಡ ವಿಶ್ವಕಪ್ ಗೆಲ್ಲುವುದೇ?]
ಬಿಸಿಸಿಐ ಜನವರಿ 6 ರಂದು ಪ್ರಕಟ ಮಾಡಿದ ವಿಶ್ವಕಪ್ ತಂಡಕ್ಕೆ ಯುವರಾಜ್ ಹೆಸರು ಸೇರ್ಪಡೆಗೊಳ್ಳುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಸ್ಥಾನ ಪಡೆಯುವಲ್ಲಿ ಆಲ್ ರೌಂಡರ್ ವಿಫಲರಾಗಿದ್ದರು.[ವಿಶ್ವಕಪ್ ಗೆ 15 ಸದಸ್ಯರ ತಂಡ ಪ್ರಕಟ]