ವಡೋದರಾ, ಡಿ. 24: ಭಾರತೀಯ ಕ್ರಿಕೆಟ್ ಪಟುಗಳು ಜನಪ್ರಿಯರಷ್ಟೇ ಅಲ್ಲ ಕಲಹಪ್ರಿಯರೂ ಆಗುತ್ತಿದ್ದಾರೆ.
ಹೌದು, ಭಾರತೀಯ ಕ್ರೀಡಾಪಟುಗಳು ಈಚೆಗೆ ವಿವಿಧ ಕಾರಣಗಳಿಗಾಗಿ ಪದೇ ಪದೆ ಜಗಳಕ್ಕಾಗಿ ಸುದ್ದಿಯಾಗುತ್ತಿದ್ದಾರೆ. ಈಗ ಯೂಸುಫ್ ಪಠಾಣ್ ಸರದಿ. ಅಸಹನೀಯ ಮಾತನಾಡಿದ ವೀಕ್ಷಕನೋರ್ವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. [ಡ್ರೆಸಿಂಗ್ ರೂಂನಲ್ಲಿ ಧವನ್ - ಕೊಹ್ಲಿ ಫೈಟ್ ?]
ನಡೆದದ್ದೇನು? : ರಿಲಯನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬರೋಡಾ ಮತ್ತು ಜಮ್ಮು ಕಾಶ್ಮೀರದ ಮಧ್ಯೆ ಬುಧವಾರ ರಣಜಿ ಟ್ರೋಫಿ ನಡೆಯುತ್ತಿತ್ತು. ಬರೋಡಾ ಪರ ಬ್ಯಾಟ್ ಮಾಡುತ್ತಿದ್ದ ಯೂಸುಫ್ ಪಠಾಣ್ ವೀಕ್ಷಕನೋರ್ವ ಮಾಡಿದ ಕಾಮೆಂಟ್ನಿಂದ ಸಿಟ್ಟಿಗೆದ್ದು ಆತನಿಗೆ ಕಪಾಳ ಮೋಕ್ಷ ಮಾಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬರೋಡಾ ಕ್ರಿಕೆಟ್ ಅಸೋಸಿಯೇಶನ್ (ಬಿಸಿಎ) ಕಾರ್ಯದರ್ಶಿ ಸ್ನೇಹಾ ಪಾರಿಖ್, "ಏಟು ತಿಂದಿರುವ ವೀಕ್ಷಕನು ಯೂಸುಫ್ ಪಠಾಣ್ ಹಾಗೂ ಇತರ ಆಟಗಾರರಿಗೆ ಅಸಹನೀಯವಾಗಿ ಕಾಮೆಂಟ್ ಮಾಡುತ್ತಿದ್ದ. ಪಿಚ್ನ ಇನ್ನೊಂದು ಬದಿಯಲ್ಲಿ ಅಂಬಟಿ ರಾಯುಡು ಆಡುತ್ತಿದ್ದರು. ಆದರೆ, ವೀಕ್ಷಕನ ಕಾಮೆಂಟ್ ತಡೆದುಕೊಳ್ಳುವಷ್ಟು ಸಹನೆ ಯೂಸುಫ್ ಅವರಲ್ಲಿ ಇರಲಿಲ್ಲ. ಆದ್ದರಿಂದ ಮೈದಾನದಿಂದ ಹೊರಬಂದ ನಂತರ ಯೂಸುಫ್ ಟೀಕೆ ಮಾಡಿದ ಯುವಕನನ್ನು ಡ್ರೆಸಿಂಗ್ ರೂಂನ ಒಳಗೆ ಕರೆದರು. ನಂತರ ಆತನಿಗೆ ಎರಡು ಬಾರಿ ಕಪಾಳ ಮೋಕ್ಷ ಮಾಡಿದರು" ಎಂದು ತಿಳಿಸಿದರು. [ಆಸ್ಟ್ರೇಲಿಯಾ ಕನ್ನಡತಿಯ ಕ್ರಿಕೆಟ್ ವ್ಯಾಮೋಹ]
"ಈ ವಿಷಯ ತಿಳಿದ ಇರ್ಫಾನ್ ಪಠಾಣ್ ತಕ್ಷಣ ಡ್ರೆಸಿಂಗ್ ರೂಂ ಒಳಗೆ ಹೋಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು" ಎಂದು ಪಾರೀಖ್ ಹೇಳಿದ್ದಾರೆ. [ವಿಶ್ವಕಪ್ ಕ್ರಿಕೆಟ್ : ಸಚಿನ್ ರಾಯಭಾರಿ]
ಕುಟುಂಬದವರಿಂದ ಕ್ಷಮೆ : ಬಿಸಿಎ ಇನ್ನೋರ್ವ ಕಾರ್ಯದರ್ಶಿ ಅಂಶುಮನ್ ಗಾಯಕ್ವಾಡ್ ಪ್ರತಿಕ್ರಿಯಿಸಿ, "ಏಟು ತಿಂದ ಯುವಕನ ಕುಟುಂಬದ ಸದಸ್ಯನೋರ್ವ ಕಾಮೆಂಟ್ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಆದ್ದರಿಂದ ಅಲ್ಲಿಗೆ ಪ್ರಕರಣ ಮುಗಿದಿದೆ" ಎಂದು ತಿಳಿಸಿದರು. [ಲಂಕಾ ಕ್ರಿಕೆಟ್ : ಮಂಚವೇರಿದರೆ ತಂಡಕ್ಕೆ ಆಯ್ಕೆ]
"ಮುಂದಿನ ಕ್ರಮಕ್ಕಾಗಿ ಘಟನೆಯ ಕುರಿತು ಬಿಸಿಸಿಐ ಗೆ ಪಂದ್ಯದ ರೆಫರಿ ವರದಿ ಸಲ್ಲಿಸಲಿದ್ದಾರೆ" ಎಂದು ಪಾರೀಖ್ ತಿಳಿಸಿದ್ದಾರೆ.