ಸಿಡ್ನಿ, ಜ. 26 : ತ್ರಿಕೋನ ಸರಣಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಜನವರಿ 30 ರಂದು ಭಾರತ ಮತ್ತು ಇಂಗ್ಲೆಂಡ್ ನಡೆಯುವ ಪಂದ್ಯ ನಿರ್ಣಾಯಕವಾಗಿದ್ದು ಗೆದ್ದ ತಂಡ ನೇರವಾಗಿ ಫೈನಲ್ ತಲುಪುವುದು.
ಮೊದಲಿನಿಂದಲೂ ಮಳೆ ಪಂದ್ಯಕ್ಕೆ ಕಾಟ ಕೊಡುತ್ತಲೇ ಇತ್ತು. ಪಂದ್ಯ ಆರಂಭವಾದರೂ 16 ಓವರ್ ಗಳಲ್ಲಿ 69 ಗಳಿಸಿದ್ದ ವೇಳೆ ವರುಣ ಪಂದ್ಯಕ್ಕೆ ಅಡ್ಡಲಾದ. ಅಲ್ಲಿಗೆ ಪಂದ್ಯವನ್ನು ಅಂತ್ಯಗೊಳಿಸಲಾಗಿತು. ಪರಿಣಾಮ ಎರಡೂ ತಂಡಗಳು ತಲಾ 2 ಅಂಕ ಹಂಚಿಕೊಂಡವು.[ರಾಹುಲ್ ದ್ರಾವಿಡ್ ಮೇಲೆ ದಾಳಿ ಮಾಡಿದ್ದ ಅಭಿಮಾನಿ]
ಇಲ್ಲಿಯವರೆಗೆ ಸೋಲು ಕಾಣದ ಆಸ್ಟ್ರೇಲಿಯಾ ಈ ಪಂದ್ಯದಿಂದಲೂ ಎರಡೂ ಅಂಕ ಪಡೆದುಕೊಂಡು ಒಟ್ಟು 15 ಅಂಕ ದಾಖಲಿಸಿದೆ. ಒಂದು ಪಂದ್ಯ ಗೆದ್ದಿರುವ ಇಂಗ್ಲೆಂಡ್ 5 ಅಂಕ ಗಳಿಸಿದ್ದರೆ, ಇನ್ನೂ ಜಯದ ರುಚಿ ಕಾಣದ ಭಾರತ ಕೇವಲ 2 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ. ಹಾಗಾಗಿ ಭಾರತ ಮತ್ತು ಇಂಗ್ಲೆಂಡ್ ಪಂದ್ಯ ಸೆಮಿಫೈನಲ್ ಆಗಿ ಪರಿಣಮಿಸಿದೆ.
ಮಳೆಯಿಂದ 40 ನಿಮಿಷ ತಡವಾಗಿ ಆರಂಭವಾದ ಪಂದ್ಯಲ್ಲಿ ಭಾರತ ಬ್ಯಾಟಿಂಗ್ ಆರಂಭಿಸಿತ್ತು. 2.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಭಾರತ 6 ರನ್ ಗಳಿಸಿದ್ದಾಗ ಮೊದಲು ಮಳೆ ಅಡ್ಡಿ ಮಾಡಿತು.[ಗಬ್ಬಾದಲ್ಲಿ ಎದ್ದ ಬಿನ್ನಿ, ಬಿದ್ದ ಭಾರತ, ಗೆದ್ದ ಇಂಗ್ಲೆಂಡ್]
ಮತ್ತೆ ಆರಂಭವಾದ ಪಂದ್ಯಕ್ಕೆ ಮಳೆ ಕೇವಲ 16 ಓವರ್ ಆಟ ನಡೆಯಲು ಅವಕಾಶ ನೀಡಿತು. ಪಂದ್ಯ ರದ್ದಾಗುವ ವೇಳೆ ಭಾರತ 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತ್ತು. ಭಾರತದ ಪರ ಅಜಿಂಕ್ಯ ರಹಾನೆ 28 ರನ್ ಗಳಿಸಿ ಆಡುತ್ತಿದ್ದು ಮತ್ತೊಂದೆಡೆ ವಿರಾಟ್ ಕೊಹ್ಲಿ ಕ್ರೀಸ್ ಕಾಯ್ದುಕೊಂಡಿದ್ದರು.