ಬೆಂಗಳೂರು, ಅಕ್ಟೋಬರ್. 13: ವೈರಿಗಳ ದಾಳಿಗೆ ಸಿಕ್ಕು ಕಾಲು ಕಳೆದುಕೊಂಡ ಸೈನಿಕ ವಿಶ್ವ ಮಿಲಿಟರಿ ಗೇಮ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಹಿಂದಿರುಗಿದ್ದಾರೆ. ತಮಿಳುನಾಡು ಮೂಲದ ಸೈನಿಕ ಲಾನ್ಸೆ ನಾಯ್ಕ್ ಆನಂದನ್ ಗುಣಶೇಖರ್ ಅವರ ನೆರವಿಗೆ ನಿಂತಿರುವುದು ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್.
ಕೊರಿಯಾದಲ್ಲಿ ನಡೆದ ವಿಶ್ವ ಮಿಲಿಟರಿ ಗೇಮ್ಸ್ನ 200 ಮೀ. ಓಟದಲ್ಲಿ ಚಿನ್ನ ಗೆದ್ದು ದೇಶಕ್ಕೆ ಆಗಮಿಸಿದ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಏಷ್ಯಾ ಮಟ್ಟದ ದಾಖಲೆಯನ್ನು ಸಹ ಆನಂದ್ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಭಾರತದ ಬ್ಲೇಡ್ ರನ್ನರ್ (ಹಾನಿಯಾದ ಕಾಲಿಗೆ ಕೃತಕ ಕಾಲು ಜೋಡಣೆ)ಎಂದು ಹೆಸರು ಪಡೆದುಕೊಂಡಿರುವ ಆನಂದನ್ ಅವರ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಲೇಬೇಕು.[ಎದೆಹಾಲು ಮಗುವಿಗೆ ಮಾತ್ರವಲ್ಲ ಅಥ್ಲೀಟ್ ಗಳಿಗೂ ಲಭ್ಯ!]
ಈ ಹಿಂದೆ 2014ರಲ್ಲಿ ಉತ್ತರ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೇಟಿಕ್ ಚಾಂಪಿಯನ್ಶಿಪ್ನಲ್ಲಿ 200 ಮೀ.ನಲ್ಲಿ ಚಿನ್ನ, 100 ಮೀ.ನಲ್ಲಿ ಬೆಳ್ಳಿ ಮತ್ತು 4/100 ಮೀ. ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2014ರಲ್ಲಿ ನಡೆದ ಏಶ್ಯನ್ ಗೇಮ್ಸ್ನಲ್ಲಿ ಭಾಗವಹಿಸಿ 100 ಮೀ. ಮತ್ತು 200 ಮೀ.ನಲ್ಲಿ ಓಟದಲ್ಲಿ 6ನೇ ಸ್ಥಾನ ಪಡೆದಿದ್ದರು. ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೇಟಿಕ್ ಚಾಂಪಿಯನ್ಶಿಪ್ನಲ್ಲಿ 3 ಚಿನ್ನ ಗೆದ್ದ ಸಾಧನೆ ಆನಂದನ್ ಹೆಸರಿನಲ್ಲಿದೆ.[ಅಥ್ಲೀಟ್ ಚಿನ್ನ ಗೆದ್ದರೆ ಬೆತ್ತಲಾಗುತ್ತೇನೆ!]
ಕಾಲು ಕಳೆದುಕೊಂಡ ಕರಾಳ ದಿನ
ಆನಂದನ್ ಮದ್ರಾಸ್ ರೆಜಿಮೆಂಟ್ನ ಯೋಧ. ಅದು 2008ರ ಜೂನ್ 4ನೇ ತಾರೀಖು. ಜಮ್ಮು-ಕಾಶ್ಮೀರದ ಕಪೋಡಾ ಜಿಲ್ಲೆಯ ಗಡಿಯಲ್ಲಿ ಸೈನಿಕರು ಪಹರೆ ನಡೆಸುತ್ತಿದ್ದರು. 11 ಮಂದಿಯ ತಂಡದಲ್ಲಿ ಆನಂದನ್ ಸಹ ಇದ್ದರು. ಆದರೆ ನೆಲದಡಿ ಪಾಕ್ ಸೈನಿಕರು ಹುದುಗಿಸಿಟ್ಟಿದ್ದ ಬಾಂಬ್ ಏಕಾಏಕಿ ಸ್ಫೋಟಗೊಂಡಿತ್ತು. ಬಾಂಬ್ ಆನಂದನ್ ಕಾಲನ್ನು ತನ್ನ ಜತೆಗೆ ಕೊಂಡೊಯ್ದಿತ್ತು.