ಬೆಂಗಳೂರು, ನ.23: ವಿಶ್ವ ಕ್ರಿಕೆಟ್ ನ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆತ್ಮಚರಿತ್ರೆ ಮತ್ತೊಂದು ಕಹಿನೆನಪನ್ನು ತೆರೆದಿಟ್ಟಿದೆ. ಮುಜುಗರವಾಗಿ ನೋವುಂಡರೂ ದೇಶಕ್ಕಾಗಿ ಆಡುವ ಅನಿವಾರ್ಯತೆ, ಕರ್ತವ್ಯ ಪ್ರಜ್ಞೆಯ ಬಗ್ಗೆ ಸಚಿನ್ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕದಲ್ಲಿ ವಿವರಿಸಿದ್ದಾರೆ. ಒಳ ಉಡುಪಿನಲ್ಲಿ ಟಿಶ್ಯೂ ಪೇಪರ್ ಇಟ್ಕೊಂಡು ಕ್ರೀಸ್ ನಲ್ಲಿ ನಿಂತಿದ್ದಾಗ ಹೇಗಿತ್ತು ಪರಿಸ್ಥಿತಿ ಎಂಬುದನ್ನು ನೆನಸಿಕೊಂಡರೆ ಮೈ ಜುಂ ಎನ್ನುತ್ತದೆ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 2003ರ ಐಸಿಸಿ ವಿಶ್ವಕಪ್ ಸೂಪರ್ ಸಿಕ್ಸ್ ಹಂತದ ಪಂದ್ಯವೊಂದರಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಮಾ.10ರಂದು ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಲು ನಾನು ದೈಹಿಕವಾಗಿ ಸಮರ್ಥನಿರಲಿಲ್ಲ. ನನಗೆ ಹೊಟ್ಟೆ ನೋವು ಕಾಡುತ್ತಿತ್ತು. ಭೇದಿ ಶುರುವಾಗಿತ್ತು. ಅದರೆ, ಅನಿವಾರ್ಯವಾಗಿ ಕ್ರೀಸಿಗೆ ಇಳಿಯಲೇ ಬೇಕಾಗಿತ್ತು. [ಕನ್ನಡದಲ್ಲೂ ಓದಬಹುದು ಸಚಿನ್ ಆತ್ಮಕಥೆ!]
ದೇಹದಲ್ಲಿ ನೀರಿನ ಅಂಶ ನಿಮಿಷ ನಿಮಿಷಕ್ಕೂ ಕಡಿಮೆಯಾಗುತ್ತಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡ ಈ ನೋವಿನಿಂದ ಇನ್ನೂ ನಾನು ಚೇತರಿಸಿಕೊಂಡಿರಲಿಲ್ಲ. ತಂಪು ಪಾನೀಯಕ್ಕೆ ಉಪ್ಪು ಬೆರೆಸಿ ಕುಡಿದಿದ್ದು ನನ್ನ ನೋವನ್ನು ಇನ್ನಷ್ಟು ಉಲ್ಬಣಗೊಳಿಸಿತ್ತು. ಒಂದು ಚಮಚ ಉಪ್ಪು ನನ್ನ ಹೊಟ್ಟೆಗೆ ಮಾರಕವಾಗಿ ಬಿಟ್ಟಿತ್ತು. ಶ್ರೀಲಂಕಾ ವಿರುದ್ಧ ಆಡುವುದೇ ಅನುಮಾನ ಎಂಬ ಪರಿಸ್ಥಿತಿಯಿತ್ತು. [ದೇವರ ಮೆಚ್ಚುಗೆ ಪಡೆಯುವಲ್ಲಿ ಸೋತ ಕಪಿಲ್]
ಅದರೆ, ನಾನು ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾದೆ. ಒಳಉಡುಪಿನಲ್ಲಿ ಟಿಶ್ಯೂಗಳನ್ನು ಇಟ್ಟುಕೊಂಡು ಭೇದಿ ಸಮಸ್ಯೆಗೆ ತಡೆಯೊಡ್ಡಿ ನಿಂತೆ. ಡ್ರಿಂಕ್ಸ್ ವಿರಾಮದ ವೇಳೆ ಪೆವಿಲಿಯನ್ ಗೆ ತೆರಳಬೇಕಾಯಿತು. ಅದರೆ, ಹಾಗೂ ಹೀಗೂ ನಾನು 97 ರನ್ ಮಾಡಿದೆ, ಅದರೆ, ಈ ಕಹಿನೆನಪು ಸವಿಯಾಗಿ ಪರಿಣಮಿಸಿತು. ನಾವು ಶ್ರೀಲಂಕಾ ವಿರುದ್ಧ 183 ರನ್ ಗಳಿಂದ ಗೆಲುವು ಸಾಧಿಸಿದೆವು ನನ್ನ ಪ್ರಯತ್ನ ಫಲ ನೀಡಿತ್ತು ಎಂದು ಸಚಿನ್ ಬರೆದುಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಸೆಂಚುರಿಯನ್ ನಲ್ಲಿ 98ರನ್ ಹೊಡೆದು ಪಂದ್ಯಶ್ರೇಷ್ಠರೆನಿಸಿದ್ದ ಸಚಿನ್ ಅವರು ಶ್ರೀಲಂಕಾ ವಿರುದ್ಧ 120 ಎಸೆತಗಳಲ್ಲಿ 97ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. (ಐಎಎನ್ಎಸ್)