ಮುಂಬೈ,ನ.3: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನ ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ. 1997ರಲ್ಲೇ ಸಚಿನ್ ನಿವೃತ್ತಿ ಬಯಸಿದ್ದರು ಎಂಬ ಮಾಹಿತಿ ಹೊರಬಿದ್ದ ನಂತರ ಗ್ರೆಗ್ ಚಾಪೆಲ್ ಬಗ್ಗೆ ಸಚಿನ್ ಬರೆದ ಸಾಲುಗಳು ಸಂಚಲನ ಉಂಟು ಮಾಡಿವೆ.
ಸಚಿನ್ ತೆಂಡೂಲ್ಕರ್ ಅವರ ಆತ್ಮ ಚರಿತ್ರೆ ಇದೇ ವಾರ ಲೋಕಾರ್ಪಣೆಗೊಳ್ಳಲಿದೆ. 'ಪ್ಲೇಯಿಂಗ್ ಇಟ್ ಮೈ ವೇ' ಪುಸ್ತಕದಲ್ಲಿರುವ ಹಲವಾರು ವಿಷಯಗಳು ಹಲವರನ್ನು ಹಲವು ರೀತಿ ಕಾಡುವುದರಲ್ಲಿ ಸಂಶಯವಿಲ್ಲ. ಸೋಮವಾರ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾದ ಮಾಜಿ ಕೋಚ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಗ್ರೆಗ್ ಚಾಪೆಲ್ ರನ್ನು ಸಚಿನ್ ಅವರು ರಿಂಗ್ ಮಾಸ್ಟರ್ ಎಂದು ಕರೆದಿದ್ದಾರೆ.
ಟೀಂ ಇಂಡಿಯಾದ ಆಟಗಾರರನ್ನು ರಿಂಗ್ ಮಾಸ್ಟರ್ ನಿಯಂತ್ರಿಸುತ್ತಿದ್ದರು ತಮ್ಮ ಆಲೋಚನೆಗಳನ್ನು ಆಟಗಾರರ ಮೇಲೆ ಹೇರುತ್ತಿದ್ದರು ಎಂದು ಸಚಿನ್ ಅವರ ಆತ್ಮಕಥೆಯಲ್ಲಿ ಬರೆಯಲಾಗಿದೆ.[ನವೆಂಬರ್ ನಲ್ಲಿ ಸಚಿನ್ ಆತ್ಮಕಥೆ ರಿಲೀಸ್]
2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವಕಪ್ ಗೂ ಮುನ್ನ ಅಂದಿನ ನಾಯಕ ರಾಹುಲ್ ದ್ರಾವಿಡ್ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ರನ್ನು ಕೂರಿಸಲು ಶ್ರಮಿಸಿದರು ಎಂದು ತಿಳಿದು ಬಂದಿದೆ. 2005ರಿಂದ 2007ರ ವಿಶ್ವಕಪ್ ಮುಗಿಯುವ ತನಕ ಭಾರತ ತಂಡ ಕೋಚ್ ಆಗಿ ಗ್ರೆಗ್ ಕಾರ್ಯನಿರ್ವಹಿಸಿದ್ದರು.
ಈ ಬಗ್ಗೆ ವಿವರಿಸಿರುವ ಸಚಿನ್, ರಾಹುಲ್ ದ್ರಾವಿಡ್ ರಿಂದ ನಾಯಕತ್ವ ಕಸಿದುಕೊಳ್ಳಿ ಆನಂತರ ನಾವಿಬ್ಬರೂ ಒಟ್ಟಿಗೆ ಹಲವು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಆಳಬಹುದು" ಎಂದು ನನ್ನ ಪತ್ನಿ ಅಂಜಲಿ ಜೊತೆಗಿದ್ದಲೇ ಹೇಳಿದ್ದರು. ನಮ್ಮಿಬ್ಬರು ಈ ಮಾತುಗಳು ಆಘಾತ ತಂದಿತ್ತು.
ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ, ಹಲವಾರು ಆಟಗಾರರು ಗ್ರೆಗ್ ವಿರುದ್ಧ ತಿರುಗಿಬಿದ್ದಿದ್ದು, ಆನಂತರದ ಬೆಳವಣಿಗೆ, ಗ್ರೆಗ್ ರಾಜೀನಾಮೆ ನೀಡಿದ್ದು ಎಲ್ಲವನ್ನು ಸಚಿನ್ ಅವರು ತಮ್ಮ ಪುಸ್ತಕದ ಅಧ್ಯಾಯವೊಂದರಲ್ಲಿ ವಿವರಿಸಿದ್ದಾರೆ. [ಮೋದಿ ಕೋರಿಕೆ ಈಡೇರಿಸಿದ ಸಚಿನ್]
ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಸೌರವ್ ಗಂಗೂಲಿ ಅವರ ಜೊತೆ ಗ್ರೆಗ್ ಚಾಪೆಲ್ ನಡೆದುಕೊಂಡ ರೀತಿ ಬಗ್ಗೆ ಕೂಡಾ ಪುಸ್ತಕದಲ್ಲಿ ವಿವರಿಸಲಾಗಿದೆ. ಸೌರವ್ ಹಾಗೂ ಗ್ರೆಗ್ ಜಟಾಪಟಿ ಹೇಗೆ ತಂಡಕ್ಕೆ ಮುಳುವಾಯಿತು. ಗ್ರೆಗ್ ಅವರ ಕೋಚಿಂಗ್ ವಿಧಾನವನ್ನು ಏಕೆ ನಾನು ಇಷ್ಟಪಡುತ್ತಿರಲಿಲ್ಲ ಎಂಬುದನ್ನು ಸಚಿನ್ ವಿವರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಎಲ್ಲವೂ ನವೆಂಬರ್ 6 ರಂದು ಪುಸ್ತಕ ಲೋಕಾರ್ಪಣೆಗೊಂಡ ಮರುಕ್ಷಣವೇ ತಿಳಿಯಲಿದೆ.