ನವದೆಹಲಿ, ಅಕ್ಟೋಬರ್ 05: 12 ರಾಷ್ಟ್ರಗಳ ಕಬಡ್ಡಿ ವಿಶ್ವಕಪ್ ನಿಂದ ಪಾಕಿಸ್ತಾನವನ್ನು ಹೊರ ಹಾಕಲಾಗಿದೆ. ಭಾರತದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ ಎಂಬ ಕಾರಣಕ್ಕೆ ಪಾಕಿಸ್ತಾನವನ್ನು ಟೂರ್ನಿಯಿಂದ ಹೊರಗಿಡಲಾಗಿದೆ.
ಉರಿ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿದ್ದರಿಂದ ಈ ಕ್ರಮಕ್ಕೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ (ಐಕೆಎಫ್) ಮುಂದಾಗಿದೆ ಎಂದು ಮುಖ್ಯಸ್ಥ ದೇವರಾಜ್ ಚತುರ್ವೇದಿ ತಿಳಿಸಿದ್ದಾರೆ. [ಕಬಡ್ಡಿ ವಿಶ್ವಕಪ್ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ]
ಫೇವರೀಟ್ ತಂಡವೇ ಔಟ್: ಆರು ರಾಷ್ಟ್ರಗಳ ಕಬಡ್ಡಿ ಕಪ್ ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. ಏಷ್ಯನ್ ಬೀಚ್ ಗೇಮ್ಸ್ ನಲ್ಲೂ ಗೆಲುವು ಸಾಧಿಸಿ ವಿಶ್ವಕಪ್ ಕಬಡ್ಡಿ ಟೂರ್ನಿಯ ಫೇವರೀಟ್ ತಂಡ ಎನಿಸಿಕೊಂಡಿತ್ತು. ಆದರೆ, ಈಗ ಈ ನಿರ್ಣಯ ಕೇಳಿ ನಿರಾಶೆಯಾಗಿದೆ ಎಂದು ಪಾಕಿಸ್ತಾನದ ನಾಯಕ ನಾಸೀರ್ ಅಲಿ ಹೇಳಿದ್ದಾರೆ.
ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡ 14 ಜನರ ತಂಡಕ್ಕೆ ಅನೂಪ್ ಕುಮಾರ್ ನಾಯಕರಾಗಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಲಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ.
ಕಬಡ್ಡಿ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಬರುವಂತೆ ಎರಡೂವರೆ ತಿಂಗಳ ಹಿಂದೆಯೇ ಪಾಕ್ ತಂಡಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಉರಿ ದಾಳಿ ಹಿನ್ನೆಲೆಯಲ್ಲಿ ಪಾಕ್ ತಂಡದ ಆಟಗಾರರಿಗೆ ಭಾರತ ಸರ್ಕಾರ ವೀಸಾ ನಿರಾಕರಿಸಿತ್ತು ಎಂದು ಪಂಜಾಬ್ ಕಬಡ್ಡಿ ಸಂಸ್ಥೆಯ ಸಿಕಂದರ್ ಸಿಂಗ್ ಮಲೂಕ್ ತಿಳಿಸಿದ್ದಾರೆ.