ಪರ್ತ್, ಫೆ.2: ಟೀಂ ಇಂಡಿಯಾದ ಪ್ರಮುಖ ವೇಗಿ ಇಶಾಂತ್ ಶರ್ಮ ಅವರ ವಿಶ್ವಕಪ್ ಕನಸು ಭಗ್ನಗೊಳ್ಳುವ ಸೂಚನೆ ಸಿಕ್ಕಿದೆ. ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ವಿಶ್ವಕಪ್ ವೇಳೆಗೆ ಗುಣಮುಖರಾಗುವುದು ಅನುಮಾನ ಎನಿಸುತ್ತಿದೆ.
ವಿಶ್ವಕಪ್ ಆಡಲಿರುವ ಟೀಂ ಇಂಡಿಯಾದ 15 ಜನರ ತಂಡದಲ್ಲಿ ಒಬ್ಬರಾದ ಇಶಾಂತ್ ಶರ್ಮ ಅವರು ಗಾಯಾಳುವಾಗಿರುವುದರಿಂದ ಅವರ ಬದಲಿಗೆ ಮತ್ತೊಬ್ಬ ಶರ್ಮ ತಂಡ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ತ್ರಿಕೋನ ಸರಣಿಯ ಕೊನೆ ಪಂದ್ಯವಾಡಿದ ಮೋಹಿತ್ ಶರ್ಮ ಅವರು ಬದಲಿ ಆಟಗಾರನಾಗಿ ತಂಡ ಸೇರಿದರೂ ಅಚ್ಚರಿ ಪಡಬೇಕಾಗಿಲ್ಲ. [ವಿಶ್ವಕಪ್ 2015: ಎಲ್ಲಾ ತಂಡಗಳ ಪಟ್ಟಿ]
ಪರ್ತ್ ಪಂದ್ಯಕ್ಕೆ ಮುನ್ನ ನಾಯಕ ಎಂಎಸ್ ಧೋನಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ 'ಇಶಾಂತ್ ಶರ್ಮ ಇನ್ನು ಗುಣಮುಖರಾಗಿಲ್ಲ. ನೆಟ್ ಅಭ್ಯಾಸದ ವೇಳೆ ಮತ್ತೆ ನೋವು ಕಾಣಿಸಿಕೊಂಡಿತು. ಹೀಗಾಗಿ ಇಶಾಂತ್ ಸಂಪೂರ್ಣ ಗುಣಮುಖರಾಗದ ಹೊರತು ಅವರನ್ನು ಅಂತಿಮ XI ನಲ್ಲಿ ಆಯ್ಕೆ ಮಾಡುವ ಕುರಿತು ಯೋಚಿಸಬೇಕಿದೆ' ಎಂದಿದ್ದರು. [ಸೋಲಿನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ]
ಫೆ.14ರಿಂದ ವಿಶ್ವಕಪ್ 2015 ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಫೆ.15ರಂದು ಅಡಿಲೇಡ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಇಶಾಂತ್ ಅಲಭ್ಯರಾಗಿರುತ್ತಾರೆ.
ತ್ರಿಕೋನ ಸರಣಿಯ ಕೊನೆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2/36 ಕಿತ್ತ ಮೋಹಿತ್ ಅವರು ತಂಡಕ್ಕೆ ಆಯ್ಕೆಯಾಗಿ ಮೊದಲ ವಿಶ್ವಕಪ್ ಆಡುವ ಅವಕಾಶ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. [ಧೋನಿ ಅಭಿಮಾನಿಗಳಿಗೆ ಈ ಸುದ್ದಿ ರುಚಿಸುವುದಿಲ್ಲ!]
2011ರ ವಿಶ್ವಕಪ್ ಸಂದರ್ಭದಲ್ಲಿ ಟೂರ್ನಿ ಆರಂಭಕ್ಕೂ ಮುನ್ನ ವೇಗಿ ಪ್ರವೀಣ್ ಕುಮಾರ್ ಗಾಯಾಳುವಾಗಿ ತಂಡದಿಂದ ಹೊರ ನಡೆಯಬೇಕಾಯಿತು. ಅವರ ಬದಲಿಗೆ ಶ್ರೀಶಾಂತ್ ಗೆ ಆಡುವ ಅದೃಷ್ಟ ಸಿಕ್ಕಿತು. ಭಾರತದ ಎರಡನೇ ಬಾರಿ ವಿಶ್ವಕಪ್ ಎತ್ತಿ ಚಾಂಪಿಯನ್ ಎನಿಸಿಕೊಂಡಿದ್ದು ಈಗ ಇತಿಹಾಸ.
ಒನ್ ಇಂಡಿಯಾ ಸುದ್ದಿ