ತಿರುವನಂತಪುರಂ, ಜೂನ್ 09: ಭಾರತದ ಹೆಮ್ಮೆಯ ಮಾಜಿ ಅಥ್ಲೀಟ್, ಒಲಿಂಪಿಯನ್ ಅಂಜು ಬಾಬಿ ಜಾರ್ಜ್ ಅವರು ಕೇರಳದ ಕ್ರೀಡಾ ಸಚಿವ ಇ. ಪಿ. ಜಯರಾಜನ್ ವಿರುದ್ಧ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಗುರುವಾರ(ಜೂನ್ 09) ದೂರು ನೀಡಿದ್ದಾರೆ. ಈ ಮೂಲಕ ಜಯರಾಜನ್ ಮತ್ತೆ ಸುದ್ದಿಯಲ್ಲಿದ್ದಾರೆ.
ಬಾಕ್ಸಿಂಗ್ ಜಗತ್ತಿನ ದಂತಕತೆ ಮಹಮದ್ ಅಲಿ ನಿಧನದ ಸುದ್ದಿಗೆ ಪ್ರತಿಕ್ರಿಯಿಸಿದ್ದ ಕ್ರೀಡಾ ಸಚಿವ ಜಯರಾಜನ್ ಅವರು, ಆತ ಕೇರಳದ ಕ್ರೀಡಾಪಟು, ಕೇರಳಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿ ನಗೆಪಾಟಲಿಗೆ ತುತ್ತಾಗಿದ್ದರು.ಈಗ ಜಯರಾಜನ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ, ಮಾನಸಿಕ ಕಿರುಕುಳ ಆರೋಪ ಹೊರೆಸಲಾಗಿದೆ. [ಶಾಕಿಂಗ್ : 'ತಂಡ ಸೇರಬೇಕಾದ್ರೆ, ಕೋಚ್ ಜತೆ ಮಂಚ ಏರಬೇಕಾಗಿತ್ತು']
ಅರ್ಜುನ ಪ್ರಶಸ್ತಿ ವಿಜೇತ ಅಂಜು ಜಾರ್ಜ್ ಅವರು ಕೇರಳ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷೆಯಾಗಿದ್ದಾರೆ. ಕ್ರೀಡಾ ಪ್ರಾಧಿಕಾರದ ಸದಸ್ಯರೆಲ್ಲರೂ ಕಾಂಗ್ರೆಸ್ ಸರ್ಕಾರ ನೇಮಿಸಿದವರಾಗಿದ್ದು, ಇತರ ಸದಸ್ಯರ ವಿರುದ್ಧ ಕೂಡಾ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಪ್ರಾಧಿಕಾರದ ಸದಸ್ಯರ ವರ್ಗಾವಣೆಯನ್ನು ತಡೆಹಿಡಿಯುತ್ತಿದ್ದಾರೆ. ಕ್ರೀಡಾಸಚಿವರಾದ ಜಯರಾಜನ್ ಅವರಿಗೆ ತಮ್ಮ ಇಲಾಖೆಯ ಬಗ್ಗೆ ಏನೂ ಗೊತ್ತಿಲ್ಲ, ನಾನು ಕಾಂಗ್ರೆಸ್, ಬಿಜೆಪಿ ಅಥವಾ ಸಿಪಿಎಂ ಪಕ್ಷಗಳ ಕಾರ್ಯಕರ್ತೆಯಲ್ಲ. ಯಾವ ಪಕ್ಷಕ್ಕೂ ಸೇರಿದವಲ್ಲ. ನನ್ನ ಶಾಶ್ವತ ಪಕ್ಷ ಕ್ರೀಡೆಯಾಗಿದ್ದು, ಇದಕ್ಕಾಗಿಯೇ ನಾನು ಜೀವನ ಪರ್ಯಂತ ದುಡಿಯುತ್ತೇನೆ. ಆದರೆ ಕೇರಳದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕ್ರೀಡಾಭಿವೃದ್ಧಿಗೆ ಮಾರಕವಾಗಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಅಂಜು ತಮ್ಮ ಲಿಖಿತ ದೂರಿನಲ್ಲಿ ಹೇಳಿದ್ದಾರೆ.
2003ರ ವಿಶ್ವ ಚಾಂಪಿಯನ್ ಶಿಪ್ ನ ಅಥ್ಲೆಟಿಕ್ಸ್ ನಲ್ಲಿ ಲಾಂಗ್ ಜಂಪ್ ನಲ್ಲಿ ಪದಕ ಗೆದ್ದ ಬಳಿಕ ಅಂಜು ಬಾಬಿ ಜಾರ್ಜ್ ಅವರಿಗೆ ಕ್ರೀಡಾ ಖಾತೆಯಲ್ಲಿ ಉನ್ನತ ಹುದ್ದೆ ನೀಡಲಾಗಿತ್ತು.