ಬ್ರಿಸ್ಬೇನ್, ಡಿ. 20: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ನಿರಂತರ ಎರಡನೇ ಬಾರಿಗೆ ಕೈಚೆಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸೋಲಲು ಕಾರಣಗಳಾದ 10 ಅಂಶಗಳಾವುವು ಎಂಬುದರ ಕುರಿತು ತಂಡದ ನಾಯಕ ಎಂ.ಎಸ್. ಧೋನಿ ಪಟ್ಟಿ ಮಾಡಿದ್ದಾರೆ.
ಹೊರದೇಶದಲ್ಲಿ ಭಾರತಕ್ಕೆ ಮತ್ತೊಂದು ಸೋಲು
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2ನೇ ಪಂದ್ಯವಾಗಿದ್ದ ಬ್ರಿಸ್ಬೇನ್ ಟೆಸ್ಟ್ನಲ್ಲಿ ಕೂಡ ಭಾರತ ಗೆಲ್ಲಲಾಗದೆ ಕೈಚೆಲ್ಲಿದೆ. ಈ ಮೂಲಕ ಆಸ್ಟ್ರೇಲಿಯಾ 2-0 ಗಳಿಂದ ಸರಣಿ ಮುನ್ನಡೆ ಸಾಧಿಸಿದೆ.
81 ರನ್ ಗಳಿಸಿದ್ದ ಶಿಖರ್ ಧವನ್ ನಾಲ್ಕನೇ ದಿನ ಗಾಯದ ಹಿನ್ನೆಲೆಯಲ್ಲಿ ಮೈದಾನಕ್ಕಿಳಿಯಲಿಲ್ಲ. ಧವನ್ ಅಭ್ಯಾಸ ನಿರತರಾಗಿದ್ದಾಗ ಬಲಗೈ ಮಣಿಕಟ್ಟಿಗೆ ತೀವ್ರ ಗಾಯ ಮಾಡಿಕೊಂಡಿದ್ದು ಕಾರಣ. ಆಗ ಕಣಕ್ಕಿಳಿದ ಕೋಯ್ಲಿ ಕೇವಲ 1 ರನ್ ಗಳಿಸಿ ನಿರ್ಗಮಿಸಿದಾಗ ಭಾರತದ ವಿಶ್ವಾಸ ಕುಸಿಯಲಾರಂಭಿಸಿತ್ತು.
ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಗೆಲ್ಲಲು 128 ರನ್ಗಳ ಗುರಿ ಪಡೆದಿತ್ತು. ಈ ಸಣ್ಣ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (6) ಹಾಗೂ ಶೇನ್ ವ್ಯಾಟ್ಸನ್ (0) ವಿಕೆಟ್ ಕಳೆದುಕೊಂಡಿತ್ತು. ಅತ್ಯಂತ ವೇಗವಾಗಿ ಆರು ವಿಕೆಟ್ಗಳನ್ನು ಒಪ್ಪಿಸಿ ಒಂದು ಹಂತದಲ್ಲಿ ಆತಂಕದಲ್ಲಿತ್ತು. ಆದರೆ, ಮಿಚ್ಚೆಲ್ ಮಾರ್ಶ್ ಅವರ ರಕ್ಷಣಾತ್ಮಕ ಆಟ, ಅತ್ಯಂತ ಕಡಿಮೆ ಮೊತ್ತದ ಗುರಿ ಹಾಗೂ ಸಾಕಷ್ಟು ವಿಕೆಟ್ ಕೈಲಿದ್ದ ಕಾರಣ ಗೆಲುವಿನ ಗುರಿ ಮುಟ್ಟಿತು. [ಉತ್ತರ ಕರ್ನಾಟಕಕ್ಕೆ ವಿಶೇಷ ಕ್ರಿಕೆಟ್ ಮಂಡಳಿ ರಚಿಸಿ]
ವಿದೇಶಿ ಪಿಚ್ನಲ್ಲಿ ಎಂ.ಎಸ್. ಧೋನಿ ಅತ್ಯಂತ ಕಳಪೆ ಕಾರ್ಯನಿರ್ವಹಣೆ ಈ ಬಾರಿಯೂ ಮುಂದುವರಿದಿದೆ. ವಿದೇಶಿ ಪಿಚ್ನಲ್ಲಿ ದೋನಿಗೆ ಇದು 14ನೇ ಸೋಲು. 2011ರಿಂದ ಧೋನಿ ಇಂಗ್ಲೆಂಡ್ನಲ್ಲಿ ಏಳು, ಆಸ್ಟ್ರೇಲಿಯಾದಲ್ಲಿ ನಾಲ್ಕು, ನ್ಯೂಜಿಲೆಂಡ್ನಲ್ಲಿ ಒಂದು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಒಂದು ಪಂದ್ಯ ಸೋತಿದ್ದಾರೆ.
ಎರಡು ಪಂದ್ಯಗಳನ್ನು ಸೋತಿರುವ ಧೋನಿ ಪಡೆ ಮೂರನೇ ಪಂದ್ಯಕ್ಕಾಗಿ ಮೆಲ್ಬೋರ್ನ್ ನಗರಕ್ಕೆ ತೆರಳಲಿದೆ.
ಡ್ರೆಸಿಂಗ್ ರೂಂನಲ್ಲಿ ಸಂವಹನ ಕೊರತೆ ಕಾಡಿತೇ?
ಬ್ರಿಸ್ಬೇನ್ ಪಂದ್ಯ ಸೋಲಿನ ಪರಾಮರ್ಶೆಗಿಳಿದಿರುವ ಎಂ.ಎಸ್. ಧೋನಿ, 4ನೇ ದಿನದ ಆಟದ ಆರಂಭಕ್ಕೂ ಮೊದಲು ಡ್ರೆಸಿಂಗ್ ರೂಂನಲ್ಲಿ ಆಟಗಾರರ ಮಧ್ಯೆ ಸಂವಹನ ಕೊರತೆ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಶಿಖರ್ ಧವನ್ ಗಾಯಗೊಂಡ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಭಾರತ ಎಡವಿದೆ. ಬ್ಯಾಟಿಂಗ್ಗೆ ಶಿಖರ್ ಹೋಗಬೇಕೋ ಅಥವಾ ಕೊಯ್ಲಿ ಇಳಿಯಬೇಕೋ ಎಂಬುದನ್ನು ನಿರ್ಧರಿಸಿರಲಿಲ್ಲ. ಗಾಯಗೊಂಡಿದ್ದ ಶಿಖರ್ ನೋವು ತೋಡಿಕೊಂಡಿರಲಿಲ್ಲ. ಆದ್ದರಿಂದ ಅವರು ಆಡಬಹುದೆಂದು ಎಣಿಸಿದ್ದೆವು. ಆದರೆ, ಹಾಗಾಗದೆ ಅನಿರೀಕ್ಷಿತವಾಗಿ ಮೈದಾನಕ್ಕಿಳಿದ ವಿರಾಟ್ ಕೊಯ್ಲಿ ಸೇರಿದಂತೆ ಉಳಿದ ಆಟಗಾರರು ದೃಢವಾಗಿ ನಿಲ್ಲುವಲ್ಲಿ ವಿಫಲರಾದರು.
ಆಹಾರ ಸೌಲಭ್ಯಕ್ಕೆ ಇಶಾಂತ್ ಅತೃಪ್ತಿ
ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸಿದ್ಧಪಡಿಸಿದ್ದ ಆಹಾರದ ಮೆನುವಿನಲ್ಲಿ ಸಸ್ಯಾಹಾರವೇ ಇರಲಿಲ್ಲ. ಅಪ್ಪಟ ಸಸ್ಯಾಹಾರಿಯಾಗಿರುವ ಇಶಾಂತ್ ಶರ್ಮಾ ಹಾಗೂ ಸುರೇಶ್ ರೈನಾ ಅನಿವಾರ್ಯವಾಗಿ ಮೂರನೇ ದಿನದ ಮಧ್ಯಾಹ್ನದ ಊಟಕ್ಕಾಗಿ ಹೊರಗೆ ತೆರಳಿದ್ದರು.
ಬ್ರಿಸ್ಬೇನ್ಗೆ ಭಾರತ ತಂಡ ಬಂದಿಳಿದಾಗಲೇ ಪೂರೈಕೆಯಾದ ಆಹಾರದ ಕುರಿತು ಅತೃಪ್ತಿ ಮೂಡಿದ್ದರೂ ಹೊರಗೆ ತೋಡಿಕೊಂಡಿರಲಿಲ್ಲ. ಆದರೆ, ಇಶಾಂತ್ ಶರ್ಮಾ ಹಾಗೂ ಸುರೇಶ್ ರೈನಾ ಊಟಕ್ಕಾಗಿ ಹೊರಗೆ ತೆರಳಿದಾಗ ವಿಷಯ ಜಗಜ್ಜಾಹೀರಾಯಿತು. ಈ ಪಂದ್ಯದಲ್ಲಿ ಸುರೇಶ್ ರೈನಾ ಆಟವಾಡುತ್ತಿಲ್ಲ. ಆದ್ದರಿಂದ ಅವರಿಗೇನೂ ಸಮಸ್ಯೆ ಉಂಟಾಗದಿದ್ದರೂ ಇಶಾಂತ್ ಶರ್ಮಾ ಸಮಸ್ಯೆ ಎದುರಿಸಬೇಕಾಯಿತು.