ತಿರುವನಂತಪುರಂ, ಅ.07: ತರಬೇತುದಾರನ ಕಿರುಕುಳಕ್ಕೆ ಬೇಸತ್ತು ಕೇರಳದ ಕ್ರೀಡಾ ಹಾಸ್ಟೆಲ್ ನಲ್ಲಿ ಕ್ರೀಡಾಪಟುಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ನೆನಪು ಮಾಸುವ ಮುನ್ನವೇ ಯುವ ಅಥ್ಲೀಟ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ.
ಕಣ್ಣೂರು ಮೂಲದ 17 ವರ್ಷದ ಕಿರಿಯ ಅಥ್ಲೀಟ್ ಆತ್ಮಹತ್ಯೆ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಯನಾಡ್ ನ ಕಾಲ್ಪೆಟ್ಟದಿಂದ ವರದಿಯಾಗಿದೆ. ವಯನಾಡ್ ಜಿಲ್ಲಾ ಮಹಿಳಾ ಕೌನ್ಸಿಲ್ ಸ್ಪೋರ್ಟ್ಸ್ ಹಾಸ್ಟೆಲ್ನ ಕೊಠಡಿಯೊಂದರಲ್ಲಿ ಮಂಗಳವಾರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಥ್ಲೀಟ್ ರಸ್ನಾ ಮೋಲ್ ಅವರ ಶವ ಪತ್ತೆಯಾಗಿದೆ. [ಟ್ರೈನರ್ ಕಿರುಕುಳ ಮಹಿಳಾ ಅಥ್ಲೀಟ್ ಆತ್ಮಹತ್ಯೆ]
ಮುಂಜಾನೆ ಅಭ್ಯಾಸ ನಡೆಸಿದ ಬಳಿಕ ಸುಮಾರು 11.30ರ ಹೊತ್ತಿಗೆ ಈ ಘಟನೆ ನಡೆದಿರಬಹುದು ಎಂದು ಹಾಸ್ಟೆಲ್ ವಾರ್ಡನ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ತರಬೇತಿ ಮುಗಿಸಿದ ಬಳಿಕ ಅಕೆ ಬಳಿ ಇದ್ದ ಮೊಬೈಲ್ ಫೋನ್ ಬಗ್ಗೆ ಆಕೆಯನ್ನು ವಾರ್ಡನ್ ಪ್ರಶ್ನಿಸಿದ್ದಾರೆ. ಇದರಿಂದ ಬೇಸತ್ತ ರಸ್ನಾ ಮೋಲ್ ಅವರು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ.
ನಿಯಮದ ಪ್ರಕಾರ ಹಾಸ್ಟೆಲ್ ನಲ್ಲಿರುವ ಅಥ್ಲೀಟ್ ಗಳು ಮೊಬೈಲ್ ಫೋನ್ ಬಳಸುವಂತಿಲ್ಲ. ರಾಷ್ಟ್ರೀಯ ಇಂಟರ್ ಕ್ಲಬ್ ಅಮೆಚೂರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಪ್ರತಿಭಾವಂತೆ ಸಾವಿನ ಬಗ್ಗೆ ಕೋಚ್ ತಾಲಿಬ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಫೋನ್ ಬಗ್ಗೆ ವಾರ್ಡನ್ ಹಾಗೂ ಕೋಚ್ ಜೊತೆ ಆಕೆ ಕಿತ್ತಾಟವಾಡಿಕೊಂಡಿದ್ದಲ್ಲದೆ, ವಾರ್ಡನ್ ಅವರು ಆಕೆ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿ ರಸ್ನಾಮೋಲ್ ಅವರ ತಾಯಿ ಬೈದಿದ್ದಾರೆ.
ಈ ಎಲ್ಲಾ ಸಂಭಾಷಣೆ, ಚರ್ಚೆಯಿಂದ ಬೇಸತ್ತ ರಸ್ನಾಮೋಲ್ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ತರಬೇತುದಾರರ ಕಿರುಕುಳ ಅಥವಾ ಇನ್ಯಾವುದೇ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೋಯಿಕ್ಕೊಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಕಲ್ಪೆಟ್ಟ ಪೊಲೀಸ್ ಠಾಣೆ ಸಬ್ ಇನ್ಸ್ ಪ್ರೆಕ್ಟರ್ ರಾಮ ಉನ್ನಿ ಹೇಳಿದ್ದಾರೆ.