ಹುಬ್ಬಳ್ಳಿ, ನವೆಂಬರ್, 26 : ನಗರದ ರಾಜನಗರದ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯ ಬುಧವಾರ ಕೊನೆಯ ದಿನದ ಹಾದಿಯಲ್ಲಿದೆ. ಈಗಾಗಲೇ ದೆಹಲಿ ತಂಡವು ಕರ್ನಾಟಕ ತಂಡದೊಂದಿಗೆ ಡ್ರಾ ಮಾಡಿಕೊಳ್ಳಲು ಪರಿತಪಿಸುತ್ತಿದೆ.
ಕರ್ನಾಟಕ ಆಟಗಾರರೊಂದಿಗೆ ವಿಶಿಷ್ಟ ಅಭಿಮಾನಿಯೊಬ್ಬ ಆಗಮಿಸಿದ್ದಾನೆ ಇಲ್ಲಿಗೆ. ಸುಹಾಸ್ ನಾಯ್ಡು ಎಂಬಾತನೇ ತಂಡದೊಂದಿಗೆ ಆಗಮಿಸಿದ ಅಭಿಮಾನಿ. ಸುಮಾರು 22 ವಯಸ್ಸಿನ ಸುಹಾಸ್ ಕರ್ನಾಟಕ ತಂಡದ ಆಧಿಕೃತ ಸದಸ್ಯನೇನೂ ಅಲ್ಲ. ಆದರೆ, ಕರ್ನಾಟಕ ತಂಡ ಎಲ್ಲೆಲ್ಲಿ ರಣಜಿ ಪಂದ್ಯವನ್ನಾಡಲು ತೆರಳುತ್ತದೆಯೋ ಆ ಊರಿಗೆ ಸುಹಾಸ್ ತಪ್ಪಿಸದೇ ಹಾಜರಿರುತ್ತಾನೆ.
ಈ ಸುಹಾಸ್ನಂತೂ ಮೈದಾನದಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರಿಗೆ ಹುರುಪು ತುಂಬೋ ಕೆಲಸ ಮಾಡುತ್ತಾನೆ. ಒಬ್ಬನೇ ಸುಮಾರು 10 ಜನರು ಹುರಿದುಂಬಿಸುವ ರೀತಿಯಲ್ಲಿ ಕರ್ನಾಟಕ ತಂಡವನ್ನು ಉತ್ತೇಜಿಸುತ್ತಾನೆ.
ಈಗಾಗಲೇ ಹುಬ್ಬಳ್ಳಿಯಲ್ಲಿ ಪ್ರೇಕ್ಷಕರ ಕೊರತೆ ಎದುರಿಸಿದ ರಣಜಿ ಪಂದ್ಯಕ್ಕೆ, ಕೇವಲ ಸುಹಾಸನೊಬ್ಬನೇ ರಾಜ್ಯ ಆಟಗಾರರಿಗೆ ಉತ್ತೇಜನ ನೀಡುವ ಮೂಲಕ ಗಮನ ಸೆಳೆದ. ಮಜವಾದ ವಿಷಯವೆಂದರೆ ಕ್ರಿಕೆಟ್ ಆಟಗಾರರಗಿಂತ ಸುಹಾಸನನ್ನೇ ನೋಡಲು ಸಾಕಷ್ಟು ಜನರು ಬರುತ್ತಿದ್ದಾರೆ.