ಪಂಜಾಬ್, ಡಿ. 21: ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ಮತ್ತೊಮ್ಮೆ ಪಾರುಪತ್ಯ ಮೆರೆದಿದೆ. ಸತತ ಐದನೇ ಬಾರಿಗೆ ಪುರುಷರು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮಹಿಳೆಯರು 4 ಬಾರಿ ಸಾಧನೆ ಮಾಡಿ ಬೀಗಿದ್ದಾರೆ.
ಗುರು ಗೋವಿಂದ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪುರುಷರು 45-42 ಅಂತರದಲ್ಲಿ ಪಾಕಿಸ್ತಾನವನ್ನು ನಾಲ್ಕನೇ ಸಾರಿ ಬಗ್ಗುಬಡಿದರೆ, ಮಹಿಳೆಯರ ತಂಡ 36-27 ಅಂತರದಿಂದ ನ್ಯೂಜಿಲೆಂಡ್ ನ್ನು ಮಣಿಸಿತು.[ಸತತ ಏಳನೇ ಬಾರಿ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ]
ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯ ತುರುಸಿನಿಂದ ಕೂಡಿತ್ತು. ರೈಡರ್ ಗಳಾದ ಸಂದೀಪ್ ಸಿಂಗ್ ಮತ್ತು ಸಂದೀಪ್ ಲುಧಾರ್ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಯದ್ವಿಂದರ್ ಸಿಂಗ್ ಮತ್ತು ಗೋಪಿ ಸಹ ಎದುರಾಳಿ ಆಟಗಾರರನ್ನು ಬಲೆಗೆ ಕೆಡವಿ ಅಂಕ ಹೆಚ್ಚಳ ಮಾಡಿದರು. ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿತು.
ಮೊದಲಿನಿಂದಲೂ ಭಾರದತ ಮಹಿಳೆಯರು ಆಕ್ರಮಣಕಾರಿ ಆಟವನ್ನೇ ಆಡಿಕೊಂಡು ಬಂದರು. ಪ್ರಿಯಾಂಕಾ ದೇವಿ, ರಾಮ್ ಬಟೇರಿ, ಸುಖ್ವಿಂದರ್ ಕೌರ್ ಭಾರತದ ಗೆಲುವಿಗೆ ಕೊಡುಗೆ ನೀಡಿದರು.
ಭಾರತದ ಪುರುಷರ ತಂಡ 2 ಕೋಟಿ ಮೊತ್ತದ ಪ್ರಶಸ್ತಿ ಪಡೆದರೆ ರನ್ನರ್ಸ್ ಅಪ್ ಪಾಕಿಸ್ತಾನ 1 ಕೋಟಿ ರೂ. ಪಡೆದುಕೊಂಡಿತು. ಮಹಿಳೆಯರ ತಂಡ 1 ಕೋಟಿ ರೂ.ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ ಅತ್ಯಾಧುನಿಕ ಕ್ರೀಡಾಂಗಣವೊಂದನ್ನು ಉದ್ಘಾಟನೆ ಮಾಡಲಾಯಿತು.