ಲಂಡನ್, ಜೂನ್ 18 : ಹಾಕಿ ವರ್ಲ್ಡ್ ಲೀಗ್ 2017 ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿರುವ ಭಾರತ ಹಾಕಿ ತಂಡ, ಭಾರತದ ಗಡಿಯಲ್ಲಿ ಪಾಕ್ ಭಯೋತ್ಪಾದಕರಿಂದ ನಡೆಯುತ್ತಿರುವ ಅಪ್ರಚೋದಿತ ದಾಳಿಯನ್ನು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಖಂಡಿಸಿದ್ದಾರೆ.
ಭಾರತದ ಯೋಧರು ಎಷ್ಟೇ ಎಚ್ಚರದಿಂದಿದ್ದರೂ ಪಾಕ್ ಉಗ್ರರು ಗಡಿಯಲ್ಲಿ ನುಸುಳಿಕೊಂಡು ಯೋಧರ ಮೇಲೆ, ಪೊಲೀಸರ ಮೇಲೆ, ನಾಗರಿಕರ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಇದನ್ನು ಖಂಡಿಸಿ ಭಾರತದ ಹಾಕಿ ಆಟಗಾರರು ಪಾಕ್ ಆಟಗಾರರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ.
ವಿಶ್ವ ಹಾಕಿ ಲೀಗ್, ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ
ಅದೂ ಅಂಥಿಂಥ ಗೆಲುವಲ್ಲ. 7-1 ಅಂತರದಿಂದ ಭಾರತದ ಹಾಕಿ ಆಟಗಾರರು ದಾಖಲೆಯ ಗೆಲುವು ಸಾಧಿಸಿದ್ದಾರೆ. ಇದು ಪಾಕಿಸ್ತಾನದ ವಿರುದ್ಧ ಭಾರತ ದಾಖಲಿಸಿರುವ ಅತೀದೊಡ್ಡ ಗೆಲುವು. ಭಾರತದಾದ್ಯಂತ ಕ್ರಿಕೆಟ್ ಕ್ರಿಕೆಟ್ ಅಂತ ಕ್ರಿಕೆಟ್ ಪ್ರೇಮಿಗಳು ಭಜನೆ ಮಾಡುತ್ತಿರುವ ಹೊತ್ತಿನಲ್ಲಿ ಭಾರತದ ಹಾಕಿ ಆಟಗಾರರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
2016ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೂಡ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದ ಭಾರತದ ಹಾಕಿ ಆಟಗಾರರು ಗೆಲುವನ್ನು ಭಾರತದ ಗಡಿಯನ್ನು ಕಾಯುತ್ತ ಹುತಾತ್ಮರಾದ ಯೋಧರಿಗೆ ಅರ್ಪಿಸಿದ್ದರು. ಆಗ ಕೂಡ ಯೋಧರ ಮೇಲೆ ನಡೆಯುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು. ಒಟ್ಟು ಮೂರು ಗೆಲುವಿನೊಂದಿಗೆ ಪೂಲ್ ಬಿನಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ನೆದರ್ ಲ್ಯಾಂಡ್ ಅನ್ನು ಎದುರಿಸಲಿದ್ದಾರೆ.
ಭಾರತದ ಮೇಲೆ ಪಾಕ್ ಉಗ್ರರು, ಕದನ ವಿರಾಮವನ್ನು ಉಲ್ಲಂಘಿಸಿ ಸತತ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಟವಾಡುವುದನ್ನು ನಿಲ್ಲಿಸಬೇಕೆ ಎಂಬ ಬಗ್ಗೆ ಜಿಜ್ಞಾಸೆ ನಡೆದಿತ್ತು.