ಮುಂಬೈ, ಡಿ. 23 : ಆಸ್ಟ್ರೇಲಿಯಾ ವಿರುದ್ಧದ ಕೊನೆ ಎರಡು ಟೆಸ್ಟ್ ಪಂದ್ಯಗಳಿಗೆ ಆಲ್ ರೌಂಡರ್ ರವೀಂದ್ರ ಜಡೇಜ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಡೇಜ ಭಾರತಕ್ಕೆ ಮರಳಲಿದ್ದಾರೆ. ಜಡೇಜ ಸ್ಥಾನವನ್ನು ಯುವ ಆಲ್ ರೌಂಡರ್ ಅಕ್ಷರ್ ಪಟೇಲ್ ತುಂಬಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.
ಭುಜದ ಗಾಯದಿಂದ ರವೀಂದ್ರ ಜಡೇಜ ಗಾಯದಿಂದ ಬಳಲುತ್ತಿದ್ದಾರೆ. ವಿಶ್ವಕಪ್ನ ಪೂರ್ವ ಸಿದ್ಧತಾ ಟೂರ್ನಿಯೆಂದೇ ಪರಿಗಣಿಸಲ್ಪಟ್ಟಿರುವ ಜನವರಿಯಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಜಡೇಜಾ ಪೂರ್ಣವಾಗಿ ಚೇತರಿಸಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಅವರ ಗಾಯದ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಟೀಂ ಇಂಡಿಯಾ ಪರ 9 ಏಕದಿನ ಪಂದ್ಯಗಳನ್ನು ಆಡಿರುವ 20 ವರ್ಷದ ಯುವ ಸ್ಪಿನ್ನರ್ ಪಟೇಲ್, ಒಟ್ಟು 14 ವಿಕೆಟ್ ಉರುಳಿಸಿದ್ದಾರೆ. ಅಲ್ಲದೆ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 40ಕ್ಕೆ 3 ವಿಕೆಟ್ ಪಡೆದು ಅತ್ಯುತ್ತಮ ಸಾಧನೆ ತೋರಿದ್ದರು.ಲಂಕಾ ವಿರುದ್ಧದ ಸರಣಿಯಲ್ಲಿ ಒಟ್ಟು 11 ವಿಕೆಟ್ ಖಾತೆಗೆ ಸೇರಿಸಿಕೊಂಡಿದ್ದಾರೆ.
ಗುಜರಾತ್ ಪರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಪಟೇಲ್ ಬಾಕ್ಸಿಂಗ್ ಡೇ ಟೆಸ್ಟ್ ವೇಳೆಗೆ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-2 ಅಂತರದಿಂದ ಹಿನ್ನಡೆ ಅನುಭವಿಸಿದೆ. ಮುಂದಿನ ಟೆಸ್ಟ್ ಡಿ.26 ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ. ಅಂತಿಮ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಿಗದಿಯಾಗಿದೆ.