ಬೆಂಗಳೂರು, ಜ.13: ಭಾರತದ ಪರ ಏಷ್ಯನ್ ಜ್ಯೂನಿಯರ್ ಸ್ಕ್ವಾಶ್ ಪ್ರಶಸ್ತಿ ಗೆದ್ದಿದ್ದ ರವಿ ದೀಕ್ಷಿತ್ ಅವರು ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದು ತಮ್ಮ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದ ಸುದ್ದಿ ಹಬ್ಬಿದ್ದು ತಿಳಿದಿರಬಹುದು. ಇದಕ್ಕೆ ಸ್ಪಷ್ಟನೆ ನೀಡಿರುವ ದೀಕ್ಷಿತ್, ನಾನು ಕಿಡ್ನಿ ಮಾರಾಟ ಮಾಡಲು ಮುಂದಾಗಿರಲಿಲ್ಲ. ಉದ್ವೇಗಕ್ಕೆ ಒಳಗಾಗಿ ಆ ರೀತಿ ಹೇಳಿದೆ ಕ್ಷಮಿಸಿ ಎಂದು ಹೇಳಿದ್ದಾರೆ.
ಜನವರಿ 16ರಂದು ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳಬೇಕಿರುವ ರವಿ ದೀಕ್ಷಿತ್ ಅವರು 24ನೇ ಹುಟ್ಟುಹಬ್ಬದ ದಿನಕ್ಕೂ ನಾಲ್ಕು ದಿನ ಮುಂಚಿತವಾಗಿ ಫೇಸ್ ಬುಕ್ ನಲ್ಲಿ ಆಘಾತಕಾರಿ ಸುದ್ದಿ ಹಾಕಿದ್ದಾರೆ. ತಮ್ಮ ಕಿಡ್ನಿಯನ್ನು 8 ಲಕ್ಷ ರು ಗೆ ಮಾರಾಟ ಮಾಡಲು ಸಿದ್ಧ ಎಂದು ಹೇಳಿಕೊಂಡಿದ್ದರು.
ನನಗೆ ವರದಿಗಾರರೊಬ್ಬರು ಕರೆ ಮಾಡಿ ಈ ಬಗ್ಗೆ ಕೇಳಿದಾಗ ನಾನು ನೀಡಿದ ಹೇಳಿಕೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ವಿಸ್ತರಿಸಿ ಬರೆಯಲಾಗಿದೆ ಎಂದು 23 ವರ್ಷ ವಯಸ್ಸಿನ ಏಷ್ಯನ್ ಜ್ಯೂನಿಯರ್ ಚಾಂಪಿಯನ್ ಅವರು ಹೇಳಿದ್ದಾರೆ. ಸದ್ಯ ದಕ್ಷಿಣ ಏಷ್ಯನ್ ಗೇಮ್ಸ್ ಗಾಗಿ ತಯಾರಿ ನಡೆಸಿರುವ ದೀಕ್ಷಿತ್ ಅವರು ಸ್ಕ್ವಾಶ್ ರಾಕೆಟ್ಸ್ ಫೆಡೆರೇಷನ್ ಆಫ್ ಇಂಡಿಯಾ (ಎಸ್ಆರ್ ಎಫ್) ಗೆ ಈ ಬಗ್ಗೆ ಸ್ಪಶಃಟನೆ ನೀಡಿ ಪತ್ರ ಬರೆದಿದ್ದಾರೆ.
ಸ್ಕ್ವಾಶ್ ಆಟ ನನ್ನ ಜೀವನ. ನಾನು ಇದರಲ್ಲೇ ಮುಂದುವರೆಯುತ್ತೇನೆ. ನನ್ನ ಕಿಡ್ನಿ ಮಾರಲು ನಾನು ಬಯಸಿಲ್ಲ. ಪ್ರಾಯೋಜಕತ್ವ ಸಿಗದ ಕಾರಣ ಉದ್ವೇಗಕ್ಕೆ ಒಳಗಾಗಿ ಆ ರೀತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದೆ. ನನ್ನನ್ನು ಕ್ಷಮಿಸಿ, ನಾನು ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ನಾನು ಕಳೆದ 10 ವರ್ಷದಿಂದ ಸ್ಕ್ವಾಶ್ ಕ್ರೀಡೆ ಆಡುತ್ತಿದ್ದೇನೆ. ಅನೇಕ ಟೂರ್ನಿಗಳನ್ನು ಗೆದ್ದಿದ್ದೇನೆ. ರಾಜ್ಯ, ದೇಶ, ವಿಶ್ವಮಟ್ಟದ ಪ್ರಶಸ್ತಿಗಳು ಲಭಿಸಿವೆ. ಆದರೆ, ಯಾವುದೇ ರೀತಿಯ ಆರ್ಥಿಕ ನೆರವು ನನಗೆ ಸಿಕ್ಕಿಲ್ಲ ಎಂದು ದಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ನೋವು ತೋಡಿಕೊಂಡಿದ್ದರು.
ಚೆನ್ನೈನ ಇಂಡಿಯನ್ ಸ್ಕ್ವಾಶ್ ಅಕಾಡೆಮಿ (ಐಎಸ್ಎ) ನಲ್ಲಿ ಕಳೆದ 9 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ ಯಾವುದೇ ತೊಂದರೆ ಅನುಭವಿಸಿಲ್ಲ. ಉದ್ವೇಗಕ್ಕೆ ಒಳಗಾಗಿ ಈ ರೀತಿ ಹೇಳಿಕೆ ಕೊಟ್ಟಿರಬಹುದು. ಈ ವಿಷಯ ಇಲ್ಲಿಗೆ ಬಿಟ್ಟು ಅವರು ತಯಾರಿ ನಡೆಸಲು ಬಿಡಿ ಎಂದು ಎಸ್ಆರ್ಎಫ್ಐ ಮುಖ್ಯಸ್ಥ ದೇವೇಂದ್ರ ನಾಥ್ ಸಾರಾಂಗಿ ಹೇಳಿಕೆ ನೀಡಿದ್ದಾರೆ.