ಪ್ಯಾರಿಸ್, ಮೇ 28: ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಜೂನಿಯರ್ ವಿಭಾಗದಲ್ಲಿ ಆಡಲು ಬೆಂಗಳೂರಿನ ಅಭಿಮನ್ಯು ವನ್ನಂರೆಡ್ಡಿ ಅವಕಾಶ ಗಿಟ್ಟಿಸಿದ್ದಾರೆ.
ರೆಂಡೆಝ್-ವೋಸ್ ಟೆನಿಸ್ ಪಂದ್ಯಾವಳಿಯ ಫೈನಲ್ ನಲ್ಲಿ ಹಿಕಾರು ಶಿರೈಶಿಯನ್ನು ಅಭಿಮನ್ಯು ಸೋಲಿಸುವುದರೊಂದಿಗೆ ಫ್ರೆಂಚ್ ಓಪನ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಈ ಮೂಲಕ ಟೆನಿಸ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. 17 ವರ್ಷದ ಅಭಿಮನ್ಯು 6-1, 4-6, 6-1 ಸೆಟ್ ಗಳಿಂದ 2 ಗಂಟೆ 15 ನಿಮಿಷಗಳ ಆಟದಲ್ಲಿ ಹಿಕಾರುವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದರು.
ಅಭಿಮನ್ಯು ಭವಿಷ್ಯ ನಿರ್ಧರಿಸಿದ್ದ ರೆಂಡೆಝ್-ವೋಸ್
ಹಾಗೆ ನೋಡಿದರೆ ರೆಂಡೆಂಜ್-ವೋಸ್ ಪಂದ್ಯಾವಳಿಯ ಕ್ವಾಲಿಫೈಯರ್ ಪಂದ್ಯದಲ್ಲಿ ಸಿದ್ದಾಂತ್ ಭಂತಿಯಾ ಎದುರು ಅಭಿಮನ್ಯು ಸೋತಿದ್ದರು. ಆದರೆ ಸಿದ್ಧಾಂತ್ ಗಾಯಗೊಂಡಿದ್ದರಿಂದ ಅಭಿಮನ್ಯುಗೆ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಅವರು ಈ ಟೂರ್ನಿ ಗೆದ್ದುಇದೀಗ ಫ್ರೆಂಚ್ ಓಪನ್ ಪ್ರವೇಶಿಸಿದ್ದಾರೆ.
ಫೈನಲ್ ಪಂದ್ಯದಲ್ಲೂ ಜಪಾನ್ ಆಟಗಾರ ಗಾಯವಾಗ ಮೂಗಿನಿಂದ ರಕ್ತ ಸುರಿಯುತ್ತಿದ್ದರೂ ಛಲ ಬಿಡದೆ ಆಟವಾಡಿದ್ದರು. ಹೀಗಿದ್ದೂ ಜಪಾನಿನ ಹಿಕಾರುಗೆ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ.
ಗೆಲುವಿನ ನಂತರ ಮಾತನಾಡಿದ ಅಭಿಮನ್ಯು, "ಇದು ಕೇವಲ ಆರಂಭ ಅಷ್ಟೆ. ನಾನು ಮುಂದೆಯೂ ಪಂದ್ಯಗಳನ್ನು ಗೆಲ್ಲುತ್ತೇನೆ ಎಂದುಕೊಂಡಿದ್ದೇನೆ. ನಾನು ಮೊದಲ ಬಾರಿಗೆ ಯೂರೋಪಿಗೆ ಬಂದಿದ್ದೆ ಮತ್ತು ಗೆದ್ದಿದ್ದೇನೆ. ಇದು ನನಗೆ ಬಹಳ ದೊಡ್ಡದು. ದಾರಿ ಇನ್ನೂ ದೂರವಿದೆ. ನಾನು ಮುಂದೆಯೂ ಗೆಲುವಿಗಾಗಿ ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ನಡೆಸುತ್ತೇನೆ," ಎಂದಿದ್ದಾರೆ.
ಇನ್ನು ಅಭಿಮನ್ಯುಗೆ ಭಾರತೀಯ ಮಾಜಿ ಟೆನಿಸ್ ಆಟಗಾರರಾದ ವಿವೇಕ್ ಸತ್ಯಜಿತ್ ಹಾಗೂ ವಿಶಾಲ್ ಉಪ್ಪಾಳ್ ಕೋಚ್ ಆಗಿದ್ದರೆ. ಇಬ್ಬರೂ ಅಭಿಮನ್ಯು ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.