ಅಡಿಲೇಡ್, ಫೆ.3: ವಿಶ್ವಕಪ್ 2015ಗಾಗಿ ಟೀಂ ಇಂಡಿಯಾ ಹೇಗೆ ತಯಾರಿ ನಡೆಸಿದೆ ಎಂದು ಕಣ್ಣು ಹಾಯಿಸಿದರೆ ಆಘಾತಕಾರಿ ಸುದ್ದಿ ಸಿಗುತ್ತದೆ. ತಂಡ ಪ್ರಮುಖ ವೇಗಿಗಳು ಸೇರಿದಂತೆ ನಾಲ್ವರು ಆಟಗಾರರು ಗಾಯಾಳುಗಳಾಗಿದ್ದಾರೆ.
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸ್ ಆಗುವುದು ಕಷ್ಟ ಎನಿಸುತ್ತಿದೆ. ಇಂಥ ತಂಡ ಇಟ್ಕೊಂಡು ಧೋನಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. [ವಿಶ್ವಕಪ್ 2015: ಎಲ್ಲಾ ತಂಡಗಳ ಪಟ್ಟಿ]
ರೋಹಿತ್ ಶರ್ಮ, ಇಶಾಂತ್ ಶರ್ಮ, ರವೀಂದ್ರ ಜಡೇಜ ಹಾಗೂ ಭುವನೇಶ್ವರ್ ಕುಮಾರ್ ಅವರು ಗಾಯಾಳುಗಳ ಪಟ್ಟಿಯಲ್ಲಿ ಸೇರಿದ್ದಾರೆ. ಇವರಲ್ಲದೆ ಮಿಕ್ಕ ಆಟಗಾರರ ಪೈಕಿ ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರಂತೆ. ಫೆ.7 ಈ ಎಲ್ಲಾ ಆಟಗಾರರಿಗೆ ಡೆಡ್ ಲೈನ್ ಆಗಿದ್ದು, ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸ್ ಆಗುತ್ತಾರಾ? ಕಾದು ನೋಡಬೇಕಿದೆ. [ಇಶಾಂತ್ ಶರ್ಮ ವಿಶ್ವಕಪ್ ಕನಸು ಭಗ್ನ?]
ಫೆ.8ರಿಂದ ಟೀಂ ಇಂಡಿಯಾದ ಅಭ್ಯಾಸ ಪಂದ್ಯಗಳು ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾವನ್ನು ಧೋನಿ ನೇತೃತ್ವದ ತಂಡ ಎದುರಿಸಲಿದೆ. ಫೆ.7ರಂದು ದೈಹಿಕ ಸಾಮಾರ್ಥ್ಯ ಪರೀಕ್ಷೆ ಪಾಸ್ ಆದ ಮೇಲೆ ಫೆ.8ರಂದು ಅಭ್ಯಾಸ ಪಂದ್ಯವಾಡಬೇಕಾಗುತ್ತದೆ. ನಂತರ ಮ್ಯಾನೇಜ್ಮೆಂಟ್ ಆಟಗಾರರ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. [ಸಚಿನ್, ರಿಕಿ ದಾಖಲೆ ಧೂಳಿಪಟ ಸಾಧ್ಯವೇ?]
ಫೆ.8ರ ರ ತನಕ ಇಶಾಂತ್ ಸೇರಿದಂತೆ ಎಲ್ಲಾ ಗಾಯಾಳು ಆಟಗಾರರು ಅಡಿಲೇಡ್ ನಲ್ಲೇ ಉಳಿಯಲಿದ್ದಾರೆ. ನಂತರ ಭಾರತಕ್ಕೆ ಕಳಿಸುವುದು ಅಥವಾ ಬದಲಿ ಆಟಗಾರರನ್ನು ಕರೆಸಿಕೊಳ್ಳುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. [ಸೋಲಿನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ]
ರೋಹಿತ್ ಅವರು ಶೇ 80 ರಷ್ಟು ಫಿಟ್ ಆಗಿದ್ದು, ಮೊದಲ ಅಭ್ಯಾಸ ಪಂದ್ಯಕ್ಕೆ ಲಭ್ಯರಿರುತ್ತಾರೆ. ಇತರರ ಬಗ್ಗೆ ಈಗಲೇ ಏನು ಹೇಳಲು ಆಗುವುದಿಲ್ಲ.ಇಶಾಂತ್, ಭುವನೇಶ್ವರ್ ಹಾಗೂ ಜಡೇಜ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟೀಂ ಇಂಡಿಯಾ ಮಜಾ ಮಾಡುತ್ತಿಲ್ಲ: ಟೆಸ್ಟ್ ಹಾಗೂ ಏಕದಿನ ಸರಣಿ ನಂತರ ಟೀಂ ಇಂಡಿಯಾ ರೆಸಾರ್ಟ್ ಗೆ ತೆರಳಿ ಮಜಾ ಮಾಡುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು. ಇಂಟರ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತಂಡ ನೆಲೆಸಿದೆ. ಟೆಸ್ಟ್ ಸರಣಿ ಸಂದರ್ಭದಲ್ಲೂ ಇದೇ ಹೋಟೆಲ್ ನಲ್ಲಿ ಇದ್ದೆವು ಎಂದು ತಂಡದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. (ಪಿಟಿಐ)