ಬೆಂಗಳೂರು, ಜು.3: ಪ್ರೋ ಕಬಡ್ಡಿ ಲೀಗ್ ಜುಲೈ 18ರಿಂದ ಮುಂಬೈನಲ್ಲಿ ಆರಂಭಗೊಳ್ಳಲಿದೆ.ಬೆಂಗಳೂರು ಬುಲ್ಸ್ ತಂಡ ಕಂಠೀರವ ಸ್ಟೇಡಿಯಂನಲ್ಲಿ ತಾಲೀಮು ನಡೆಸಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ನಡುವೆ ವಿದೇಶಿ ಆಟಗಾರರು ವೀಸಾ ಸಮಸ್ಯೆಯಿಂದ ತಂಡ ಸೇರಲು ಆಗುತ್ತಿಲ್ಲ ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೆರವಾಗುವ ಭರವಸೆ ಇದೆ ಎಂದು ತಂಡದ ಒಡೆಯ ಉದಯ್ ಸಿಂಘ್ ವಾಲ ಹೇಳಿದ್ದಾರೆ.
ಕ್ರೀಡಾಪ್ರಿಯರ ಆಸಕ್ತಿ ಕೆರಳಿಸಿರುವ ಪ್ರೋ ಕಬಡ್ಡಿ ಲೀಗ್ ನಲ್ಲಿ ಕಳೆದ ಬಾರಿಯಂತೆ 8 ತಂಡಗಳು 8 ನಗರಗಳಲ್ಲಿ ಪಿಕೆಎಲ್ 2 ಕಪ್ ಗಾಗಿ ಸೆಣಸಲಿವೆ. ಬೆಂಗಳೂರು ಬುಲ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ. ಚೊಚ್ಚಲ ಆವೃತ್ತಿಯಲ್ಲಿ ಸೆಮಿಫೈನಲ್ ಸಾಧನೆ ಮಾಡಿತ್ತು. ಬೆಂಗಳೂರಿನಲ್ಲಿ ಆಗಸ್ಟ್ 12ರಿಂದ 15ರವರೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ.[ಬೆಂಗಳೂರು ತಂಡದ ಪಂದ್ಯಗಳ ವೇಳಾಪಟ್ಟಿ]
ಬೆಂಗಳೂರು ಬುಲ್ಸ್ ತಂಡದ ಮಾಲೀಕ ಕಾಸ್ಮಿಕ್ ಗ್ಲೋಬಲ್ ಸಂಸ್ಥೆಯ ಸಿಇಒ ಉದಯ್ ಸಿನ್ಹಾ ವಾಲಾ ಮಾತನಾಡಿ, 'ನಮ್ಮ ತಂದದಲ್ಲಿ ಅನುಭವಿ ಹಾಗೂ ಯುವ ಆಟಗಾರರಿದ್ದಾರೆ. ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಡಿಫೆಂಡಿಂಗ್ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗಿದೆ. [ಐಪಿಎಲ್ ಆಯ್ತು ಇನ್ನು ಕಬಡ್ಡಿ ಲೀಗ್ ಹವಾ ಶುರು]
ಕಬಡ್ಡಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಯೋಜನೆ ಹೊಂದಿದ್ದೇವೆ. ಕರ್ನಾಟಕ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದೊಂದಿಗೆ ಅಕಾಡೆಮಿ ಸಂಬಂಧ ಮಾತುಕತೆ ನಡೆಸಿದ್ದೇವೆ. ಬೆಂಗಳೂರು ನನ್ನ ಎರಡನೇ ಮನೆಯಾಗಿದೆ. ಇಲ್ಲಿ ಅಕಾಡೆಮಿ ಸ್ಥಾಪಿಸಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಕನಸಿದೆ ಎಂದು ಉದಯ್ ಸಿಂಗ್ ಹೇಳಿದರು. [ಪ್ರೋ ಕಬಡ್ಡಿ: ಮುಂಬೈ ಮಣಿಸಿ ಕಪ್ ಎತ್ತಿದ ಜೈಪುರ]
ವಿದೇಶಾಂಗ ವ್ಯವಹಾರಗಳ ಇಲಾಖೆ ಮುಂದಿನ ವಾರದೊಳಗಾಗಿ ವಿದೇಶಿ ಆಟಗಾರರ ವೀಸಾ ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದೆ. ಕೇವಲ 45 ದಿನಗಳ ಹಿಂದಷ್ಟೇ ಹೊಸ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಾಗಿದೆ ಎಂದಿದ್ದಾರೆ.
ಬೆಂಗಳೂರು ಬುಲ್ಸ್ ತಂಡ: ಮಂಜಿತ್ ಚಿಲ್ಲಾರ್ (ನಾಯಕ), ಧರ್ಮರಾಜ್ ಚೆರಲಾಥಾನ್, ಪ್ರಮೋದ್ ಸಿಂಗ್, ಗುರ್ ಪ್ರೀತ್ ಸಿಂಗ್, ಅಜಯ್ ಠಾಕೂರ್, ಶರಣ್ ದಾಸ್, ಸಿನೋಧರನ್ ಕನೇಶರಾಜ್, ಬಿ ವಿನೋದ್ ಕುಮಾರ್, ರಾಜೇಶ್ ಮಂಡಲ್, ಕೆ ಏರಿಯಾನಾ,ದೀಪಕ್ ಸುರೇಶ್ ಕುಮಾರ್, ಪ್ರೀತಂ ಸಿಂಗ್, ಗುರ್ಚೇತ್ ಸಿಂಗ್, ಸುನಿಲ್ ಹನುಮಂತಪ್ಪ.(ಏಕೈಕ ಕರ್ನಾಟಕದ ಆಟಗಾರ). (ಒನ್ ಇಂಡಿಯಾ ಸುದ್ದಿ)