ಬೆಂಗಳೂರು, ಮಾರ್ಚ್ 29: ಇದೇ ವರ್ಷ ಅಕ್ಟೋಬರ್ 6ರಿಂದ 28ರವರೆಗೆ ಫಿಫಾ ಅಂಡರ್ 17 ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಭಾರತದಲ್ಲಿ ಈ ಪಂದ್ಯಾವಳಿ ನಡೆಯುತ್ತಿರುವ ವಿಶೇಷ.
ಫುಟ್ಬಾಲ್ ಇನ್ನೂ ಅಂಬೆಗಾಲಿಡುತ್ತಿರುವ ಭಾರತದಲ್ಲಿ ಈ ವಿಶ್ವಕಪ್ ಹೊಸತೊಂದು ಪರ್ವಕ್ಕೆ ನಾಂದಿ ಹಾಡಬಲ್ಲದು ಎಂದೇ ನಿರೀಕ್ಷಿಸಲಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ನಿರ್ದೇಶಕರಾದ ಶರಣ್ ಪಾರೇಖ್ ಅವರನ್ನು ಮಾತನಾಡಿಸಿದ 'ಒನ್ ಇಂಡಿಯಾ', ಕಿರಿಯರ ವಿಶ್ವಕಪ್ ಟೂರ್ನಿಯಿಂದಾಗುವ ಪ್ರಯೋಜನಗಳು ಸೇರಿದಂತೆ ದೇಶದಲ್ಲಿ ಫುಟ್ಬಾಲ್ ಅಭಿವೃದ್ಧಿಗೆ ಆಗಬೇಕಿರುವ ಕ್ರಮಗಳ ಕುರಿತಂತೆ ಅವರ ಅಭಿಪ್ರಾಯಗಳನ್ನು ಕಲೆ ಹಾಕುವ ಪ್ರಯತ್ನ ಮಾಡಿದೆ.
- ಈ ವರ್ಷ ಭಾರತದಲ್ಲಿ 17 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಇದು ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಗೆ ನೆರವಾಗಬಲ್ಲದೇ?
ಭಾರತದಲ್ಲಿನ್ನೂ ಫುಟ್ಬಾಲ್ ಬೆಳವಣಿಗೆಯು ಅಗಾಧವಾಗಿ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಈ ವರ್ಷ ಭಾರತದಲ್ಲಿ ನಡೆಯಲಿರುವ ಕಿರಿಯರ ಫುಟ್ಬಾಲ್ ಟೂರ್ನಿಯು ಹೊಸ ತಲೆಮಾರಿನ ಫುಟ್ಬಾಲ್ ಆಟಗಾರರನ್ನು ಗುರುತಿಸಲು ಸಹಾಯ ಮಾಡುತ್ತದೆ.
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ದೇಶೀಯ ಮಟ್ಟದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ಹಾಗೂ ಸಮಯವನ್ನು ನೀಡುತ್ತಲೇ ಬಂದಿದೆ. ಉಳಿದ ಕ್ಲಬ್ ಗಳೂ ಈ ನಿಟ್ಟಿನಲ್ಲಿ ಪ್ರಯತ್ನಿಸಿವೆ. ನಮ್ಮೆಲ್ಲಾ ಪ್ರಯತ್ನಗಳಿಗೆ ಅಂಡರ್ 17 ವಿಶ್ವಕಪ್ ಹೆಚ್ಚಿನ ಸಾರ್ಥಕತೆಯನ್ನು ತರಬಹುದೆಂದು ನಿರೀಕ್ಷಿಸಲಾಗಿದೆ.
- ಐ ಲೀಗ್ ಹಾಗೂ ಇಂಡಿಯನ್ ಸೂಪರ್ ಲೀಗ್ ಒಗ್ಗೂಡಿಸಿದರೆ ಲಾಭವಾಗುವುದೇ ?
ಐ ಲೀಗ್ ಹಾಗೂ ಐಎಸ್ ಎಲ್ ಗಳನ್ನು ಪರಸ್ಪರ ಬೆಸೆದು ಒಂದೇ ಟೂರ್ನಿಯನ್ನಾಗಿ ರೂಪಿಸುವ ಕಾರ್ಯ ಸಾಗಿದೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ವಿರೋಧಗಳು ಎದ್ದಿವೆ. ಆದರೆ, ನಿಜವಾಗಿಯೂ ಹೇಳಬೇಕೆಂದರೆ, ಇದೊಂದು ಉತ್ತಮ ಪ್ರಯತ್ನ. ದೇಶದ ಎರಡು ಫುಟ್ಬಾಲ್ ಟೂರ್ನಿಗಳನ್ನು ಹೀಗೆ ಒಟ್ಟಿಗೇ ಸೇರಿಸಲ್ಪಡುವುದರಿಂದ ಯುವ ಫುಟ್ಬಾಲಿಗರಿಗೆ ದೊಡ್ಡ ಆಟಗಾರರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.
- ದೇಶದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಆಗಬೇಕಾದ ಕೆಲಸಗಳೇನು?
ಪ್ರತಿಯೊಬ್ಬ ಫುಟ್ಬಾಲ್ ಆಟಗಾರ ಉತ್ತಮ ಕಲೆಗಾರಿಕೆಯನ್ನು ತನ್ನಲ್ಲಿ ರೂಢಿಸಿಕೊಳ್ಳಲು ಅವರಿಗೆ ಸ್ಫೂರ್ತಿಯ ನೆಲೆ ಅತ್ಯವಶ್ಯಕ. ಅದರ ಜತೆಗೆ ಕ್ರಮಬದ್ಧವಾದ, ಸರ್ವ ಸೌಕರ್ಯಗಳುಳ್ಳ ಕೋಚಿಂಗ್ ವ್ಯವಸ್ಥೆ, ವರ್ಷದ ಕರಾರುವಾಕ್ ಯೋಜನೆಗಳ ಅನುಷ್ಠಾನವೂ ಬೇಕು. ಇದೆಲ್ಲದರ ಜತೆಗೆ, ನ್ಯೂಟ್ರಿಷನ್, ಮಾನಸಿಕ ಆರೋಗ್ಯ ಹಾಗೂ ಇತರ ಸೌಲಭ್ಯಗಳು ನಿರ್ದಿಷ್ಟ ಕಾರ್ಯಸೂಚಿಯ ಮೂಲಕ ಒಂದು ಹೊಸ ಹಾಗೂ ಸುಸಜ್ಜಿತ ಫುಟ್ಬಾಲ್ ತಾರೆಗಳನ್ನು ಉದಯಿಸಲು ನೆರವಾಗುತ್ತದೆ.
ಇದಕ್ಕೆ ಸರ್ಕಾರದ ನೆರವೂ ಅತ್ಯಗತ್ಯವಾಗಿ ಬೇಕಿದೆ. ಸಮಾಜ, ಸರ್ಕಾರ, ಸಂಬಂಧಪಟ್ಟ ಸಂಘ-ಸಂಸ್ಥೆಗಳು ಪರಸ್ಪರ ಕೈ ಜೋಡಿಸಿ, ಒಂದು ನಿರ್ದಿಷ್ಟ ಕಾರ್ಯ ಯೋಜನೆಯಡಿ ಒಂದಾಗಿ ಹೆಜ್ಜೆ ಹಾಕಿದಲ್ಲಿ ಭಾರತವನ್ನು ಫುಟ್ಬಾಲ್ ಸ್ನೇಹಿ ರಾಷ್ಟ್ರವನ್ನಾಗಿಸಬಹುದು.