ಶಿಮ್ಲಾ, ಫೆ.29: ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವ ಟಿ20 ಪಂದ್ಯಕ್ಕೆ ಮತ್ತೊಮ್ಮೆ ವಿಘ್ನ ಎದುರಾಗಿದೆ. ಮಾರ್ಚ್ 19 ರಂದು ಧರ್ಮಶಾಲದಲ್ಲಿ ನಿಗದಿಯಾಗಿರುವ ಪಂದ್ಯಕ್ಕೆ ಕಾಂಗ್ರೆಸ್ ಪಕ್ಷದಿಂದ ತೀವ್ರ ವಿರೋಧಗಳು ಕೇಳಿಬಂದಿದೆ. ಈಗ ಕೆಲ ಬಿಜೆಪಿ ನಾಯಕರು ದನಿಗೂಡಿಸಿದ್ದಾರೆ.
'ಇತ್ತೀಚೆಗೆ ಪಾಕಿಸ್ತಾನ ಉಗ್ರರು ನಡೆಸಿದ ಪಠಾಣಕೋಟ್ ದಾಳಿಯಲ್ಲಿ ರಾಜ್ಯದ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಮಾರ್ಚ್ 19 ರಂದು ಧರ್ಮಶಾಲದಲ್ಲಿ ನಿಗದಿಯಾಗಿರುವ ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ಭಾರತ ಮತ್ತು ಪಾಕ್ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕು ಇಲ್ಲವಾದಲ್ಲಿ ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ)ಗೆ ಹಿಮಾಚಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಆಗ್ರಹಿಸಿದ್ದಾರೆ. [ವಿಶ್ವ ಟಿ20: ತಂಡಗಳು | ವೇಳಾಪಟ್ಟಿ]
ಧರ್ಮಶಾಲದಲ್ಲಿ ಯಾವುದೇ ಕಾರಣಕ್ಕೂ ಭಾರತ ಪಾಕ್ ಕ್ರಿಕೆಟ್ ಪಂದ್ಯ ನಡೆಸಬಾರದು ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗು ಸಂಸದ ಶಾಂತ ಕುಮಾರ್ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದಾರೆ. ಹೀಗೆ ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ತೀವ್ರವಾಗಿ ವಿರೋಧಗಳು ವ್ಯಕ್ತವಾಗುತ್ತಿವೆ.
ಅತ್ತ ಪಾಕಿಸ್ತಾನ ಸರ್ಕಾರವು ಅಭದ್ರತೆಯ ನೆಪ ಹೇಳಿ ಭಾರತದಲ್ಲಿ ನಡೆಯು ಟಿ-20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳಲು ಹಿಂಜರಿಯುವ ಮಾತುಗಳನ್ನಾಡಿತ್ತು. ಕೊನೆಗೆ ಐಸಿಸಿಯ ಒತ್ತಡಕ್ಕೆ ಮಣಿದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ಧರ್ಮಶಾಲಾದಲ್ಲಿ ಪಂದ್ಯ ನಡೆಯಬಾರದು ಎಂಬ ಕೂಗು ಕೇಳಿಬರುತ್ತಿವೆ. ಭದ್ರತೆ ದೃಷ್ಟಿಯಿಂದ ಪಂದ್ಯವನ್ನು ಸ್ಥಳಾಂತರಿಸಬೇಕೋ ಅಥವಾ ರದ್ದು ಮಾಡಬೇಕೋ ಎನ್ನುವ ತೀರ್ಮಾನವನ್ನು ಐಸಿಸಿ ಮತ್ತು ಬಿಸಿಸಿಐ ತೆಗೆದುಕೊಳ್ಳು ನಿರ್ಧಾರಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. (ಪಿಟಿಐ)