ಕೋಲ್ಕತಾ, ಮಾರ್ಚ್, 10: ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವ ಕಪ್ ಟಿ-20 ಪಂದ್ಯಕ್ಕೆ ಆತಂಕಗಳು ಎದುರಾಗುತ್ತಲೇ ಇವೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯ ಕೋಲ್ಕತಾ ಈಡನ್ ಗಾರ್ಡನ್ಸ್ ಗೆ ಶಿಫ್ಟ್ ಆಗಿದ್ದು ಹಳೆ ಕತೆ.
ಪಾಕಿಸ್ತಾನ ತಂಡ ಕೋಲ್ಕತಾದಲ್ಲಿ ಆಡಬಾರದು ಎಂದು ಭಯೋತ್ಪಾದನೆ ವಿರೋಧಿ ದಳ(Anti-Terrorist Front of India (ATFI) ,) ಹೇಳಿದೆ. ಪಾಕಿಸ್ತಾನ ಆಡಲು ಬಂದರೆ ಕ್ರೀಡಾಂಗಣವನ್ನು ಅಗೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದೆ.[ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ, ಕೋಲ್ಕತ್ತಾಗೆ ಶಿಫ್ಟ್]
ಭಯೋತ್ಪಾದಕರೊಂದಿಗಿನ ಸಂಬಂಧವನ್ನು ಪಾಕಿಸ್ತಾನ ಕಡಿದುಕೊಳ್ಳುವವರೆಗೂ ಅವರೊಂದಿಗೆ ಆಟ ಆಡಲು ಸಾಧ್ಯವಿಲ್ಲ. ಮುಂಬೈ ದಾಳಿ, ಪಠಾಣ್ ಕೋಟ್ ದಾಳಿಯ ರೂವಾರಿಗಳನ್ನು ಭಾರತಕ್ಕೆ ಪಾಕಿಸ್ತಾನ ಯಾಕೆ ಹಸ್ತಾಂತರ ಮಾಡಿಲ್ಲ ಎಂದು ಪ್ರಶ್ನೆ ಮಾಡಿದೆ.[ಟಿ-20 ವಿಶ್ವಕಪ್ ಸಂಪೂರ್ಣ ಮಾಹಿತಿ]
ಈ ಪಂದ್ಯ ನಮ್ಮ ವೀರ ಯೋಧರಿಗೆ ಮಾಡಿದ ಅಪಮಾನವಾಗಲಿದೆ. ನಾವು ಪಂದ್ಯ ನಡೆಯಲು ಬಿಡುವುದಿಲ್ಲ. ಈಡನ್ ಗಾರ್ಡನ್ಸ್ ಪಿಚ್ ಅಗೆದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಟಿ ಎಫ್ ಐ ಎಚ್ಚರಿಕೆ ನೀಡಿದೆ.
ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಆಟಗಾರರು ಬಂದಿಳಿಯದಂತೆ ತಡೆಯುತ್ತೇವೆ.ಇನ್ನೊಮ್ಮೆ ಸಭೆ ನಡೆಸಿ ನಮ್ಮ ಮುಂದಿನ ಹೋರಾಟಗಳ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಂಘಟನೆ ಹೇಳಿದೆ.
ಧರ್ಮಶಾಲಾದಲ್ಲಿ ಮಾರ್ಚ್ 19ರಂದು ನಡೆಯಬೇಕಿದ್ದ ಪಂದ್ಯ ಭದ್ರತೆ ಕಾರಣದಿಂದ ಕೋಲ್ಕತಾಗೆ ಸ್ಥಳಾಂತರವಾಗಿತ್ತು. ಆದರೆ ಇದೀಗ ಇಲ್ಲಿಯೂ ಪಂದ್ಯ ನಡೆಯುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.