ನವದೆಹಲಿ, ಫೆ. 02: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್, ಮಾಸ್ಟರ್ ಕ್ರಿಕೆಟ್ ಲೀಗ್ ನ ಹಾಲಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪಂಜಾಬ್ ತಂಡಕ್ಕೆ ಸಲಹೆಗಾರರಾಗಿದ್ದಾರೆ.
ಸೆಹ್ವಾಗ್ ಅವರಿಗಿರುವ ಅನುಭವ ಯುವ ಕ್ರಿಕೆಟರ್ ಗಳಿಗೆ ಸಿಗಬೇಕು. ಅಲ್ಲದೆ ಆರಂಭದಲ್ಲಿ ಅವರು ಕಿಂಗ್ಸ್ XI ಪಂಜಾಬ್ ತಂಡದ ಭಾಗವಾಗಿ ಎರಡು ವರ್ಷ ಇದ್ದರು. ಹೀಗಾಗಿ ಅವರಿಗೆ ನಮ್ಮ ತಂಡದ ಬಗ್ಗೆ ಚೆನ್ನಾಗಿ ತಿಳಿದಿದೆ. ಸೆಹ್ವಾಗ್ ಅವರು 'ಮೆಂಟರ್' ಆಗಿ ತಂಡಕ್ಕೆ ಸ್ಪೂರ್ತಿ ತುಂಬಲಿದ್ದಾರೆ ಎಂದು ಪಂಜಾಬ್ ತಂಡ ಮುಖ್ಯ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಹೊಸ ಹುದ್ದೆ, ಹೊಸ ಚಾಲೆಂಜ್ ಬಗ್ಗೆ ಖುಷಿ ಇದೆ. ಕಿಂಗ್ಸ್ XI ಪಂಜಾಬ್ ತಂಡದ ಜೊತೆ ಮತ್ತೊಮ್ಮೆ ಕೈಜೋಡಿಸಲು ಸಂತೋಷವಾಗುತ್ತಿದೆ. ತಂಡ, ಮ್ಯಾನೇಜ್ಮೆಂಟ್ ಹಾಗೂ ಪ್ರಚಾರಕರ ಜೊತೆ ನಿಕಟ ಸಂಪರ್ಕ ಹೊಂದಿದ್ದೇನೆ. ನನ್ನ ಇನ್ನೊಂದು ಕುಟುಂಬದಂತೆ ಕಾಣುತ್ತಾ ಬಂದಿದ್ದೇನೆ. ನನಗೆ ತಿಳಿದ ವಿಷಯವನ್ನು ಹಂಚಿಕೊಂಡು ಹೊಸ ಪ್ರತಿಭೆಗಳನ್ನು ಬೆಳೆಸಲು ನಾನು ಉತ್ಸುಕನಾಗಿದ್ದೇನೆ ಎಂದು ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. (ಪಿಟಿಐ)