ಲಂಡನ್, ಜೂನ್ 19: ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸೋಲು ಕಂಡ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರು ನೀಡಿದ ಹೇಳಿಕೆಗಳು ಪಾಕಿಸ್ತಾನದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಹ್ಲಿಯವರ ಮಾತುಗಳಿಗೆ ಫಿದಾ ಆಗಿರುವ ಪಾಕಿಸ್ತಾನ ಜನತೆ ಹಾಗೂ ಕ್ರಿಕೆಟ್ ಲೋಕದ ಮಾಜಿ ತಾರೆಗಳು ಟ್ವಿಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು
ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಯಾವುದೇ ಭಾವೋದ್ವೇಗಕ್ಕೊಳಗಾದ ಕೊಹ್ಲಿ, ಅತ್ಯಂತ ಕ್ರೀಡಾ ಸ್ಫೂರ್ತಿಯಿಂದ ಮಾತನಾಡಿದ್ದು ನಿಜಕ್ಕೂ ಅನುಕರಣೀಯವಾಗಿತ್ತು. ಅದರಲ್ಲಿ ಯಾವುದೇ ಕೃತಕತೆ ಅಥವಾ ಬೂಟಾಟಿಕೆ ಇರಲಿಲ್ಲ.
ಮೊದಲಿಗೆ, ಫೈನಲ್ ಪಂದ್ಯದಲ್ಲಿ ತಮ್ಮನ್ನು ಸೋಲಿಸಿದ ಪಾಕಿಸ್ತಾನ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕೊಹ್ಲಿ, ಆನಂತರ ಎದುರಾಳಿ ತಂಡವು ಟೂರ್ನಿಯಲ್ಲಿ ನಡೆದು ಬಂದ ದಾರಿಯನ್ನು ನೆನೆದರು. ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ ಪಾಕಿಸ್ತಾನ, ತನ್ನ ಸಾಮರ್ಥ್ಯಕ್ಕೆ ತಕ್ಕಂಥ ಫಲಿತಾಂಶವನ್ನು ನೀಡಿದೆ ಎಂದರು.
ಸೋತ ಪಂದ್ಯದಲ್ಲೂ ದಾಖಲೆ ಬರೆದ ಯುವರಾಜ್ ಸಿಂಗ್
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಪರವಾಗಿ ವೀರೋಚಿತ ಹೋರಾಟ ನೀಡಿದ್ದ ಫಖರ್ ಝಮಾನ್ ಅವರನ್ನು ಶ್ಲಾಘಿಸಿದ ಅವರು, ಕೆಲವೊಮ್ಮೆ ಇಂಥ ಆಟಗಾರರು ಭದ್ರವಾಗಿ ಕ್ರೀಸ್ ನಲ್ಲಿ ದಾಳಿ ನಡೆಸಲಾರಂಭಿಸಿದರೆ, ಎದುರಾಳಿಗಳಾದ ನಾವು ಸುಮ್ಮನೇ ಅವರ ಆಟವನ್ನು ನೋಡುತ್ತಾ ಇರಬೇಕಾಗುತ್ತದೆ. ಕೆಲವೊಂದು ದಿನ ಕೆಲವಾರು ಆಟಗಾರರು ಹೊರಸೂಸುವ ಆಟದ ರಭಸವನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಫಖರ್ ಅವರ ಆಟವನ್ನು ಮೆಚ್ಚಿಕೊಂಡರು.
ನಮ್ಮೆಲ್ಲಾ ತಂತ್ರಗಾರಿಕೆಯನ್ನು ಎದುರಾಳಿ ತಂಡದ ಬ್ಯಾಟ್ಸ್ ಮನ್ ಒಬ್ಬ ನೆಲಕಚ್ಚುವಂತೆ ಮಾಡುತ್ತಿದ್ದಾನೆಂದರೆ, ಒಬ್ಬ ನಾಯಕನಾಗಿ, ಬೌಲರ್ ಆಗಿ ನಾನು ಅದನ್ನು ಸುಮ್ಮನೇ ಕುಳಿತು ನೋಡಬೇಕೇ ಹೊರತು ಅದರ ಬಗ್ಗೆ ಅಸೂಯೆ ಪಡಬಾರದು ಎಂದು ಕೊಹ್ಲಿ ಹೇಳಿದರು.
'ಸಚಿನ್' ಸ್ಫೂರ್ತಿ ಕೂಡಾ ಟೀಂ ಇಂಡಿಯಾದ ತಲೆ ಕಾಯಲಿಲ್ಲ!
ಇದರ ಜತೆಗೆ, ಭಾರತ ತಂಡವು ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಿ ಫೈನಲ್ ವರೆಗೂ ಸಾಗಿಬಂದಿದ್ದರ ಬಗ್ಗೆ ಹೆಮ್ಮೆಯಿದೆ. ಹಾಗಾಗಿ, ಫೈನಲ್ ನಲ್ಲಿನ ಸೋಲು ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿಲ್ಲ. ಬದಲಾಗಿ, ತಲೆ ಎತ್ತಿಕೊಂಡು ಇಲ್ಲಿಂದ ನಮ್ಮ ದೇಶಕ್ಕೆ ನಡೆಯುತ್ತೇವೆ ಎಂದರು.