ಹರಾರೆ, ಜುಲೈ 20: ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಟೆಸ್ಟ್ ಅಂಗಳಕ್ಕೆ ಮತ್ತೆ ಮರಳುತ್ತಿದ್ದಂತೆ ನಾಯಕ ಕೊಹ್ಲಿ ಅವರು ಮೇಲೆ ಹೇಗೆ ಅವಲಂಬಿತರಾಗಿದ್ದರು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ಬಾಂಗ್ಲಾ ಪ್ರವಾಸದ ವೇಳೆ ನಡೆದ ಘಟನೆ ಈಗ ಸುದ್ದಿಯಾಗುತ್ತಿದೆ.
ಜೂನ್ 10ರಂದು ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇ ಬೇಕಾದ ಒತ್ತಡದಲ್ಲಿತ್ತು. ತಂಡದಲ್ಲಿ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಮೇಲೆ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಅವಲಂಬಿತರಾಗಿದ್ದರು. ಬಿಸಿಸಿಐ ಆಯ್ಕೆದಾರರು ಹರ್ಭಜನ್ ಸಿಂಗ್ ಆಯ್ಕೆ ಮಾಡಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು.
ಈ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಹೆಚ್ಚು ಎಡಗೈ ಬ್ಯಾಟ್ಸ್ ಮನ್ ಇದ್ದಿದ್ದರಿಂದ ಅಶ್ವಿನ್ ಜೊತೆಗೆ ಮತ್ತೊಬ್ಬ ಆಫ್ ಸ್ಪಿನ್ನರ್ ಬೇಕೆನಿಸಿತು. ಇದಕ್ಕೆ ತಕ್ಕಂತೆ ತಂಡಕ್ಕೆ ಅನುಭವದ ರಕ್ಷೆ ನೀಡಲು ಹರ್ಭಜನ್ ಮೇಲೆ ಎಲ್ಲರೂ ಕಣ್ಣು ನೆಟ್ಟಿದ್ದರು.
ಮಳೆಗೆ ಆಹುತಿಯಾದ ಪಂದ್ಯದಲ್ಲಿ ಅಶ್ವಿನ್ 5 ವಿಕೆಟ್ ಕಿತ್ತರೆ, ಹರ್ಭಜನ್ 3 ವಿಕೆಟ್ ಪಡೆದರು. ಅದರೆ, ಹರ್ಭಜನ್ ಸಿಂಗ್ ಅವರು ತಮ್ಮ ಬಗ್ಗೆ ಇಡೀ ತಂಡ, ಮ್ಯಾನೇಜರ್ ರವಿಶಾಸ್ತ್ರಿ ಹಾಗೂ ನಾಯಕ ಕೊಹ್ಲಿ ಅವರು ಹೇಗೆ ಹೆಚ್ಚಿನ ವಿಶ್ವಾಸವಿರಿಸಿದ್ದರು ಎಂಬುದರ ಬಗ್ಗೆ ಬಿಸಿಸಿಐ ವೆಬ್ ಸೈಟ್ ಜೊತೆ ಮಾತನಾಡಿದ್ದಾರೆ.
35 ವರ್ಷ ವಯಸ್ಸಿನ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಆ ಕ್ಷಣದ ಬಗ್ಗೆ ವಿವರಿಸಿ, ಮಳೆಗೆ ಆಹುತಿಯಾದ ಪಂದ್ಯದಿಂದ ಇಡೀ ತಂಡದ ಮೂಡ್ ಹಾಳಾಗಿತ್ತು. ಅದರೆ, ಸಿಕ್ಕ ಕಾಲಾವಕಾಶದಲ್ಲೇ ಗೆಲುವು ಸಾಧಿಸುವ ಬಗ್ಗೆ ಕೊಹ್ಲಿ ಕಾತುರರಾಗಿದ್ದರು. ಇದಕ್ಕಾಗಿ ನನ್ನನ್ನು ಕೇಳಿಕೊಂಡರು.
ಡ್ರೆಸಿಂಗ್ ರೂಮಿನಲ್ಲಿ ಮಾತನಾಡುತ್ತಾ, 20 ವಿಕೆಟ್ ಪಡೆಯುವುದು ಹೇಗೆ ಎಂದು ಚರ್ಚಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ಅವರು ನನ್ನ ಕಡೆ ತಿರುಗಿ ನೋಡುತ್ತಾ ವಿಕೆಟ್ ಪಡೆಯುವ ಜವಾಬ್ದಾರಿ ನಿಮ್ಮ ಮೇಲಿದೆ ನಮ್ಮನ್ನು ಗೈಡ್ ಮಾಡಿ ಎಂದರು.
ನಂತರ ರವಿಶಾಸ್ತ್ರಿ ಕೂಡಾ ನನ್ನಲ್ಲಿ ಹೆಚ್ಚಿನ ಆತ್ಮ ವಿಶ್ವಾಸ ತುಂಬಿದರು. ಹೀಗಾಗಿ ಹೆಚ್ಚಿನ ಉತ್ಸಾಹದಿಂದ ಮುಂದಿನ ಸರಣಿಯಲ್ಲಿ ಆಡಬಯಸುತ್ತೇನೆ ಎಂದು ಸೋಮವಾರ (ಜುಲೈ 19) ರಾತ್ರಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಹರ್ಭಜನ್ ಸಿಂಗ್ ಅವರ ಮಾತುಗಳನ್ನು ಕೇಳಿದರೆ, ಮುಂಬರುವ ಶ್ರೀಲಂಕಾ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಹರ್ಭಜನ್ ಸಿಂಗ್ ಅವರು ಆಡುವುದು ಖಾತ್ರಿ ಎನ್ನಬಹುದು. (ಒನ್ ಇಂಡಿಯಾ ಸುದ್ದಿ)