ಲಂಡನ್, ಜೂನ್ 16: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮ ಅವರನ್ನು ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಮಾಡಿಲ್ಲವೇಕೆ? ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ನಾಯಕ ಕೊಹ್ಲಿ ಉತ್ತರಿಸಿದ್ದಾರೆ. ಈ ನಡುವೆ ಕರ್ನಾಟಕದ ಕೆಎಲ್ ರಾಹುಲ್ ಅವರು ಗಾಯದಿಂದ ಗುಣಮುಖರಾಗಿದ್ದು, ಜುಲೈ ನಂತರ ಕಣಕ್ಕಿಳಿಯುವ ಸಾಧ್ಯತೆಯಿದೆ.
ಬಿಸಿಸಿಐ ಮೂಲಗಳ ಪ್ರಕಾರ,ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ರೋಹಿತ್ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧದ ರೋಹಿತ್ ಬದಲಿಗೆ ಕಣಕ್ಕಿಳಿದಿದ್ದ ಕರ್ನಾಟಕದ ಕರುಣ್ ನಾಯರ್ ಅವರು ತ್ರಿಶತಕ ಬಾರಿಸಿ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು. ನಂತರ ರೋಹಿತ್ ಅವರು ನ್ಯೂಜಿಲೆಂಡ್ ಸರಣಿಯಲ್ಲಿ ಸತತ ಅರ್ಧಶತಕ ಸಿಡಿಸಿದ್ದರು.
ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ, ರಿಷಬ್ ಹೊಸಮುಖ
ರೋಹಿತ್ ಬಗ್ಗೆ ಕೊಹ್ಲಿ ಮೆಚ್ಚುಗೆ: ರೋಹಿತ್ ಶರ್ಮ ಅವರು ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಮಾತ್ರವಲ್ಲ ಎಲ್ಲಾ ಮಾದರಿಯಲ್ಲೂ ಆಡಬಲ್ಲ ಸಮರ್ಥ ಬ್ಯಾಟ್ಸ್ ಮನ್. ಅವರಿಗಾಗಿ ತಂಡದಲ್ಲಿ ವಿಶೇಷ ಸ್ಥಾನವಿದೆ ಎಂದರು.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಐಪಿಎಲ್ ನಲ್ಲಿ ಪೂರ್ಣಪ್ರಮಾಣದಲ್ಲಿ ಆಡಿದ್ದ ರೋಹಿತ್ ಅವರು ವಿಶ್ರಾಂತಿ ಬಯಸದೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಿದ್ದಾರೆ. ಮುಂಬರುವ ಟೀಂ ಇಂಡಿಯಾ ಸರಣಿಗಾಗಿ ಅವರನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸೊಂಟದ ಭಾಗದಲ್ಲಿ ಶಸ್ತ್ರಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿರುವ ರೋಹಿತ್ ಅವರು ಈ ಟೂರ್ನಮೆಂಟ್ ನಲ್ಲಿ ಬಲಗಾಲಿನ ನೋವಿನಿಂದ ಬಳಲುತ್ತಿದ್ದರು. ಅವರಿಗೆ ಅಗತ್ಯವಾದ ವಿಶ್ರಾಂತಿ ನೀಡುವ ಸಲುವಾಗಿ ಮ್ಯಾನೇಜ್ಮೆಂಟ್ ಈ ನಿರ್ಣಯ ಕೈಗೊಂಡಿದೆ. ಅವರು ಫಿಟ್ ಆಗಿ ಹೆಚ್ಚು ಕಾಲ ಆಡುವುದು ಅಗತ್ಯ ಎಂದರು.