ನವದೆಹಲಿ, ಮೇ 03 : ಪ್ರತಿ ವರ್ಷ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ನೀಡಲಾಗುವ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಟೀಂ ಇಂಡಿಯಾದ ಐಕಾನ್ ಪ್ಲೇಯರ್ ವಿರಾಟ್ ಕೊಹ್ಲಿ ಅವರನ್ನು ಹಾಗೂ ಅರ್ಜುನ ಪ್ರಶಸ್ತಿಗೆ ಕ್ರಿಕೆಟಿಗ ಅಜಿಂಕ್ಯಾ ರಹಾನೆ ಅವರನ್ನು ಆಯ್ಕೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕ್ರಿಕೆಟ್ ಬೋರ್ಡ್(ಬಿಸಿಸಿಐ) ಶಿಫಾರಸ್ಸು ಮಾಡಿದೆ.
2015-16 ನೇ ಸಾಲಿನಲ್ಲಿ ವಿರಾಟ್ ಟೀಂ ಇಂಡಿಯದ ಬೆನ್ನೆಲುಬಾಗಿ ತಮ್ಮ ಆಟವನ್ನು ಪ್ರಧರ್ಶಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ, ಟೂರ್ನಿಯಿಂದ ಹಿಡಿದು 2016 ವಿಶ್ವ ಟಿ20 ಕ್ರಿಕೆಟ್ ನಲ್ಲಿ ಅಮೋಘ ಪ್ರದರ್ಶನ ನೀಡಿ 2016 ರ ವಿಶ್ವ ಟ್ವೆಂಟಿ-20 ಯಲ್ಲಿ 273 ರನ್ ಗಳಿಸಿ ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. [ಸೈನಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ]
ವಿರಾಟ್ ಅವರ ಸಾಧನೆಯನ್ನು ಗಮನಿಸಿದ ಬಿಸಿಸಿಐ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕೊಹ್ಲಿ ಅವರನ್ನು ಬೆಂಬಲಿಸಿದೆ.
ಈ ಮೂಲಕ 4 ವರ್ಷದ ಬಳಿಕ ಬಿಸಿಸಿಐ, ಕ್ರಿಕೆಟ್ ಆಟಗಾರನನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. 2012 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ದಿ ವಾಲ್ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ಶಿಫಾರಸ್ಸು ಮಾಡಿತ್ತು.
ಆದರೆ, 2012 ರ ಲಂಡನ್ ಒಲಿಂಪಿಕ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದ ವಿಜಯ್ ಕುಮಾರ್ ಹಾಗೂ 60 ಕೆ.ಜಿ. ಕುಸ್ತಿ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದ ಯೋಗೇಶ್ವರ್ ದತ್ ಅವರಿಗೆ ನೀಡಲಾಗಿತ್ತು. ಅಂದು ರಾಹುಲ್ ಅವರಿಗೆ ಖೇಲ್ ರತ್ನ ಕೈ ತಪ್ಪಿತ್ತು.
2007 ರಲ್ಲಿ ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಅವರು ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಎರಡನೇ ಕ್ರಿಕೆಟರ್ ಆಗಿದ್ದಾರೆ. ಇನ್ನು 1997-98 ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್ ಅವರು ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರಿಕೆಟಿರ್ ಎನಿಸಿಕೊಂಡಿದ್ದಾರೆ.
2012 ರ ನಂತರ 4 ವರ್ಷದ ಬಳಿಕ ಭಾರತೀಯ ಕ್ರಿಕೆಟ್ ಬೋರ್ಡ್(ಬಿಸಿಸಿಐ) ಖೇಲ್ ರತ್ನ ಪ್ರಶಸ್ತಿಗೆ ಕ್ರಿಕೆಟ್ ಆಟಗಾರನ ಹೆಸರು ಶಿಫಾರಸ್ಸು ಮಾಡಿರುವುದು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಖೇಲ್ ರತ್ನ ಪ್ರಶಸ್ತಿಯು 7.5 ಲಕ್ಷ ರು ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿರುತ್ತದೆ. ಅರ್ಜುನ ಪ್ರಶಸ್ತಿಯೂ ಅರ್ಜುನ ಪ್ರತಿಮೆ, 5 ಲಕ್ಷ ರು ನಗದು ಹೊಂದಿದೆ.