ನವದೆಹಲಿ, ಜೂ. 11: ವೆಸ್ಟ್ ಇಂಡೀಸ್ ಟಿ 20 ತಂಡದ ನಾಯಕ ಡೆರೆನ್ ಸಮಿ, ವಿರಾಟ್ ಕೊಹ್ಲಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಐಪಿಎಲ್ ನಲ್ಲಿ ಮುನ್ನಡೆಸಿದ್ದ ಕೊಹ್ಲಿ ಅವರನ್ನು ಹತ್ತಿರದಿಂದ ಗಮನಿಸಿದ್ದ ಸಮಿ ಡ್ಯಾಶಿಂಗ್ ಬ್ಯಾಟ್ಸ್ ಮನ್ ಗೆಲುವಿಗಾಗಿ ಸದಾ ಹಂಬಲಿಸುತ್ತಾರೆ ಎಂದು ಹೇಳಿದ್ದಾರೆ.
ಯಶಸ್ವಿ ನಾಯಕ ಎಂಎಸ್ ಧೋನಿ ಅವರೊಂದಿಗೆ ತುಲನೆ ಮಾಡಿ ಮಾತನಾಡಿರವ ಸಮಿ, ಎಂಎಸ್ ಆಟದಲ್ಲಿದ್ದಾಗ ಜಾಸ್ತಿ ಮಾತನಾಡುವುದಿಲ್ಲ. ಆದರೆ ವಿರಾಟ್ ಆಟದ ಒಳಗಡೆಯೇ ಬೆರೆತು ಮಾತನಾಡುತ್ತಿರುತ್ತಾರೆ ಎಂದು ಐಪಿಎಲ್ ನಲ್ಲಿ ಆರ್ ಸಿಬಿಯ ಭಾಗವಾಗಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಹೇಳಿದ್ದಾರೆ.[ಐಪಿಎಲ್, ಐಸಿಎಲ್, ಬಿಗ್ ಬ್ಯಾಷ್ ನಂತರ ಎಂಸಿಎಲ್]
ಆಕ್ರಮಣಕಾರಿ ಮನೋಭಾವ
ವಿರಾಟ್ ಅತ್ಯುತ್ತಮ ಬ್ಯಾಟ್ಸ್ ಮನ್ ಎನ್ನುವುದು ಗೊತ್ತೆ ಇದೆ. ಜತೆಗೆ ವಿರಾಟ್ ಪ್ರತಿಯೊಂದು ಪಂದ್ಯಗಳನ್ನು ಗೆಲ್ಲಲೇ ಬೇಕೆಂದು ಬಯಸುತ್ತಾರೆ. ಆರ್ ಸಿಬಿಯಲ್ಲಿ ಇದ್ದಾಗ ಯಾವ ಬಗೆಯ ಗುರಿ ಇಟ್ಟುಕೊಂಡಿದ್ದರೋ ಅದನ್ನೇ ಭಾರತ ತಂಡದ ಪರವಾಗಿ ಆಡುವಾಗಲೂ ಮುಂದುವರಿಸಿಕೊಂಡು ಬರುತ್ತಿರುವುದು ಕಾಣುತ್ತಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯ ಅವರ ನಾಯಕತ್ವಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಸಮಿ ಹೇಳಿದ್ದಾರೆ.
ಐಪಿಎಲ್ ಬಗ್ಗೆ ಮಾತನಾಡಿರುವ ಸಮಿ, ಇಡೀ ಪಂದ್ಯಾವಳಿಯಲ್ಲಿ ನಾನು ಕೇವಲ ಎರಡು ಪಂದ್ಯ ಆಡಲು ಸಾಧ್ಯವಾಯಿತು. ನಾನು ಬುಜದ ನೋವಿನಿಂದ ಬಳಲುತ್ತಿದ್ದ ಪರಿಣಾಮ ಆಡಲು ಸಾಧ್ಯವಾಗಲಿಲ್ಲ. ಈಗ ಕೆರೆಬಿಯನ್ ಕ್ರಿಕೆಟ್ ಲೀಗ್ ನಲ್ಲಿ ಸೆಂಟ್ ಲೂಸಿಯಾ ಜಾಕುಸ್ ತಂಡವನ್ನು ಮುನ್ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.['ಧೋನಿಯೊಂದಿಗೆ ಹೋಲಿಸಬೇಡಿ, ಅನುಷ್ಕಾ ನನಗೆ ಪ್ರೇರಣೆ']
ನಿವೃತ್ತಿ ಬಗ್ಗೆ ಪಶ್ಚಾತಾಪವಿಲ್ಲ
ಸಮಿ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದರು. ಈ ಬಗ್ಗೆ ಮಾತನಾಡಿರುವ ಸಮಿ ' ನನಗೆ ಆ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲ. ನನ್ನ ನಿರ್ಧಾರದಿಂದ ನನಗೇನು ನಷ್ಟವಾಗಿಲ್ಲ ಎಂದಿದ್ದಾರೆ.
ವೆಸ್ಟ್ ಇಂಡೀಸ್ ಆಟಗಾರರು ಸಾಂಪ್ರದಾಯಿಕ ಕ್ರಿಕೆಟ್ ಬಿಟ್ಟು ಹಣ ಗಳಿಕೆ ಉದ್ದೇಶದಿಂದ ಟಿ-20 ಕಡೆ ತೆರಳುತ್ತಿದ್ದಾರೆ. ಹಾಗಾಗಿ ದೇಶಿಯ ಕ್ರಿಕೆಟ್ ಗೆ ಗ್ರಹಣ ಬಡಿದಿದೆ ಎಂಬ ಭಾವನೆ ಅನೇಕರಲ್ಲಿ ಮನೆ ಮಾಡಿದೆ. ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಸಮಿ ಪಿಟಿಐ ಜತೆ ಮಾತನಾಡಿದ ವೇಳೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.