ಕೋಲ್ಕತ್ತ, ಮಾರ್ಚ್, 01 : ಶಿಸ್ತು ಬುದ್ಧ ಬೌಲಿಂಗ್ ದಾಳಿಯಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧ 73 ರನ್ಗಳ ಸುಲಭ ಜಯ ಸಾಧಿಸಿತು. ಇದರಿಂದ ಮನೀಷ್ ಪಾಂಡೆ ನೇತೃತ್ವದ ರಾಜ್ಯ ತಂಡ ಈ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿತು.
ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಮಯಂಕ್ ಅಗರವಾಲ್ ಅವರ ಅರ್ಧ ಶತಕದ ನೆರವಿನಿಂದ 47.1 ಓವರ್ಗಳಲ್ಲಿ 201 ರನ್ ಕಲೆ ಹಾಕಿತ್ತು. ಗೆಲುವಿನ ಗುರಿ ಬೆನ್ನಟ್ಟಿದ ಸೌರಾಷ್ಟ್ರ 36.2 ಓವರ್ಗಳಲ್ಲಿ 128 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.
ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ಜಾರ್ಖಂಡ್ ಮತ್ತು ಸರ್ವಿಸಸ್ ವಿರುದ್ಧ ಜಯ ಸಾಧಿಸಿ ಕರ್ನಾಟ ಒಟ್ಟು 12 ಅಂಕಗಳನ್ನು ಗಳಿಸಿದೆ.[ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ 5 ರನ್ ಗಳ ಅಮೋಘ ಜಯ]
ಸರ್ವಿಸಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿದ್ದ ಆರ್. ಸಮರ್ಥ್ (11), ಮನೀಷ್ (15), ಪವನ್ ದೇಶಪಾಂಡೆ (1) ಮತ್ತು ಅನಿರುದ್ಧ ಜೋಶಿ (2) ಸೌರಾಷ್ಟ್ರ ವಿರುದ್ಧ ವಿಫಲರಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಆರಂಭಿಕ ಬ್ಯಾಟ್ಸ್ ಮನ್ ಮಯಂಕ್ ಅವರ ಜವಾಬ್ದಾರಿಯುತ ಆಟದಿಂದ ಕರ್ನಾಟಕ ಅಲ್ಪ ಮೊತ್ತಕ್ಕೆ ಕುಸಿಯುವ ಸಂಕಷ್ಟದಿಂದ ಪಾರಾಯಿತು. 114 ಎಸೆತಗಳನ್ನು ಎದುರಿಸಿದ ಮಯಂಕ್ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 89 ರನ್ ಗಳಿಸಿ ತಂಡಕ್ಕೆ ನೆರವಾದರು.
ಮಧ್ಯಮ ಕ್ರಮಾಂಕದಲ್ಲಿ ಸ್ಟುವರ್ಟ್ ಬಿನ್ನಿ (31) ಜೊತೆ 63 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಸುಲಭ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಬ್ಯಾಟ್ಸ್ ಮನ್ ಗಳು ಕರ್ನಾಟಕದ ಬೌಲಿಂಗ್ ದಾಳಿಗೆ ಮಂಕಾದರು. ಮೂರನೇ ಓವರ್ನಲ್ಲಿ ಪ್ರಸಿದ್ಧ ಅವರು ಶೆಲ್ಡನ್ ಜಾಕ್ಸನ್ಗೆ ಪೆವಿಲಿಯನ್ ಹಾದಿ ತೋರಿಸಿ ಸೌರಾಷ್ಟ್ರಕ್ಕೆ ಶಾಕ್ ನೀಡಿದರು.
ಹೀಗೆ ಆರಂಭವಾದ ಕುಸಿತದಿಂದ ಚೇತರಿಸಿಕೊಳ್ಳಲು ಸೌರಾಷ್ಟ್ರ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ತಂಡದ ಎಂಟು ಬ್ಯಾಟ್ಸ್ ಮನ್ಗಳು ಒಂದಂಕಿಯನ್ನು ದಾಟಲಿಲ್ಲ. ನಾಯಕ ಜಯದೇವ್ ಷಾ (38), ಚಿರಾಗ್ ಸೈನಿ (25) ಮತ್ತು ಸೂರ್ಯ ಸನಾದಿಯ (31) ಅವರನ್ನು ಹೊರತುಪಡಿಸಿದರೆ ಉಳಿದವರಿಂದ ಪೆವಿಲಿಯನ್ ಪರೇಡ್ ನಡೆಸಿದರು.
ವೇಗಿಗಳಾದ ಪ್ರಸಿದ್ಧ ಕೃಷ್ಣ ಮತ್ತು ಸ್ಟುವರ್ಟ್ ಬಿನ್ನಿ ತಲಾ ಎರಡು ವಿಕೆಟ್ ಪಡೆದರು. ರೋನಿತ್ ಮೋರೆ ನಾಲ್ಕು ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಸಂಕ್ಷಿಪ್ತ ಸ್ಕೋರು:
ಕರ್ನಾಟಕ 47.1 ಓವರ್ ಗಳಲ್ಲಿ 201 (ಮಯಂಕ್ ಅಗರವಾಲ್ 89, ಮನೀಷ್ ಪಾಂಡೆ 15, ಸ್ಟುವರ್ಟ್ ಬಿನ್ನಿ 31, ರೋನಿತ್ ಮೋರೆ 18; ಕುಶಾಂತ್ ಪಟೇಲ್ 36ಕ್ಕೆ4, ಚಿರಾಗ್ ಸೈನಿ 40ಕ್ಕೆ3).
ಸೌರಾಷ್ಟ್ರ 36.2 ಓವರ್ಗಳಲ್ಲಿ 128 (ಜಯದೇವ್ ಷಾ 38, ಸೂರ್ಯ ಸನಾದಿಯ ಔಟಾಗದೆ 31; ಎಂ. ಪ್ರಸಿದ್ಧ ಕೃಷ್ಣ 19ಕ್ಕೆ2, ಎಸ್. ಅರವಿಂದ್ 20ಕ್ಕೆ1, ಸ್ಟುವರ್ಟ್ ಬಿನ್ನಿ 37ಕ್ಕೆ2, ರೋನಿತ್ ಮೋರೆ 20ಕ್ಕೆ4).