ಕೋಲ್ಕತ್ತಾ, ಅ.09: ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತನ್ನ ಮೊದಲ ಹಂತದ ಬೇಟೆ ಸುಲಭವಾಗಿ ಮುಗಿಸಿ ಜಯಭೇರಿ ಬಾರಿಸಿದೆ. ಇದೇ ಸಂದರ್ಭದಲ್ಲಿ ಭಾರತದ ಟಿ20 ಸರಣಿ ಸೋಲಿನ ಲೆಕ್ಕಾಚಾರ ನಡೆಯುತ್ತಿದೆ. ಈ ಮಧ್ಯೆ ಕಾಮೆಂಟರಿ ಬಾಕ್ಸಲ್ಲಿ ಕುಳಿತ ವಿವಿಎಸ್ ಲಕ್ಷ್ಮಣ್ ಗೆ ಟೀಂ ಇಂಡಿಯಾ ವಿಶೇಷ ಸಂದೇಶ ಕಳಿಸಿದ ಘಟನೆ ನಡೆದಿದೆ.
ಕೋಲ್ಕತ್ತಾದಲ್ಲಿ ಮೂರನೇ ಹಾಗೂ ಅಂತಿಮ ಟ್ವೆಂಟಿ 20 ಪಂದ್ಯ ಮಳೆಯ ಕಾರಣ ರದ್ದಾಗಿದೆ. ಪಿಚ್ ನಲ್ಲಿ ತೇವಾಂಶ ಹೀರುವುದು, ಮೈದಾನದ ನಿರ್ವಹಣೆ ಸರಿಯಾಗಿಲ್ಲದ ಕಾರಣ ಹಿರಿಯ ಕ್ಯೂರೆಟರ್ ಕೆಲಸ ಕಳೆದುಕೊಂಡಿದ್ದಾರೆ. ಇತ್ತ ಟೀಂ ಇಂಡಿಯಾದ ಹುಲಿಗಳು 0-2 ಅಂತರದಲ್ಲಿ ಹರಿಣಗಳ ಮುಂದೆ ಮಂಡಿಯೂರಿದ್ದಾರೆ. [ಬಿಸಿಸಿಐ ಟೀಂ ಸೇರಿದ ವಿವಿಎಸ್, ಗಂಗೂಲಿ, ತೆಂಡೂಲ್ಕರ್]
ವಿವಿಎಸ್ ಲಕ್ಷ್ಮಣ್ ಗೆ ಸಂದೇಶ: ಈಡೆನ್ ಗಾರ್ಡನ್ ಮೈದಾನದಲ್ಲಿ ಮಳೆ ಕಾಡುವ ಸಮಯದಲ್ಲಿ ಟೆಸ್ಟ್ ರಂಗದ ದಿಗ್ಗಜ ಲಕ್ಷ್ಮಣ್ ಅವರು ಸ್ಟಾರ್ ಸ್ಫೋರ್ಟ್ಸ್ ಸ್ಟುಡಿಯೋದಲ್ಲಿ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಕ್ಕಿಗಳ ಚಿತ್ತಾರವಿದ್ದ ನೀಲಿ ಬಣ್ಣದ ಶರ್ಟ್ ತೊಟ್ಟಿದ್ದರು.[ಟೀಂ ಇಂಡಿಯಾದಿಂದ ಕಳಪೆ ಪ್ರದರ್ಶನ, ಕೈ ತಪ್ಪಿದ ಟಿ20 ಸರಣಿ]
ಡ್ರೆಸಿಂಗ್ ರೂಮಿನಲ್ಲಿದ್ದ ಟೀಂ ಇಂಡಿಯಾ ಆಟಗಾರರು ತಕ್ಷಣವೇ ಪ್ಲೇಕಾರ್ಡ್ ನಲ್ಲಿ "Laxman we love your shirt" ಎಂದು ಕೆಮರಾ ಮುಂದೆ ಹಿಡಿದಿದ್ದಾರೆ. ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೊಟ್ಟ ಐಡಿಯಾದಿಂದ ಲಕ್ಷ್ಮಣ್ ಗೆ ಈ ರೀತಿ ಸಂದೇಶ ತೋರಿಸಿ ಕಿಚಾಯಿಸಿದ್ದಾರೆ. ನಾಯಕ ಧೋನಿ, ವಿರಾಟ್ ಕೊಹ್ಲಿ ಅಲ್ಲದೆ ಸಹಾಯಕ ಸಿಬ್ಬಂದಿ ಕೂಡಾ ಜೊತೆಗೂಡಿದ್ದಾರೆ.
ತಕ್ಷಣದ ಸಂದೇಶ ಕಂಡ ಲಕ್ಷ್ಮಣ್ ಕೂಡಾ ಪ್ರತಿಕ್ರಿಯಿಸಿ ಟೀಂ ಇಂಡಿಯಾ ಸದಸ್ಯರಿಗೆ ಥ್ಯಾಂಕ್ಸ್ ಎಂದಿದ್ದಾರೆ. ನಂತರ ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ನ ಚೇಷ್ಟೆಗಳು, ಹರ್ಭಜನ್ ಸಿಂಗ್ ತುಂಟಾಟ, ಸಚಿನ್, ದ್ರಾವಿಡ್ ಸೇರಿದಂತೆ ದಿಗ್ಗಜರ ಜೊತೆ ಬೆರೆತು ಮಾತುಕತೆ ಮಾಡುತ್ತಿದ್ದ ದಿನಗಳನ್ನು ಲಕ್ಷ್ಮಣ್ ಸ್ಮರಿಸಿಕೊಂಡರು. ಟೀಂ ಇಂಡಿಯಾದ ಡ್ರೆಸಿಂಗ್ ರೂಮ್ ವಿಭಿನ್ನ, ವಿಶಿಷ್ಟ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು. (ಒನ್ ಇಂಡಿಯಾ ಸುದ್ದಿ)