ಬೆಂಗಳೂರು, ಡಿಸೆಂಬರ್ 20: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತ್ರಿಶತಕ ಬಾರಿಸಿರುವ ಕರ್ನಾಟಕದ ಕರುಣ್ ನಾಯರ್ ಅವರು ಟೆಸ್ಟ್ ಪಂದ್ಯ ಮುಗಿದ ತಕ್ಷಣ ರಣಜಿ ಆಡಲು ಸಿದ್ಧರಾಗಬೇಕಿದೆ. ತಮಿಳುನಾಡು ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಕರುಣ್ ನಾಯರ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.
ತ್ರಿಶತಕ ವೀರ ಕರುಣ್ ನಾಯರ್, ಕೆಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಎಲ್ಲರೂ ರಣಜಿ ತಂಡಕ್ಕೆ ಮರಳಿದ್ದಾರೆ. ವಿನಯ್ ಕುಮಾರ್ ನೇತೃತ್ವದ 16 ಸದಸ್ಯರ ತಂಡದಿಂದ, ಅನುಭವಿ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪರನ್ನು ಕೈಬಿಡಲಾಗಿದೆ. ಕರುಣ್ ನಾಯರ್ ತಂಡದ ಉಪ ನಾಯಕರಾಗಿದ್ದಾರೆ.[303ರನ್ ಬಾರಿಸಿ, ಕರುಣ್ ಮುರಿದ ದಾಖಲೆಗಳು ಒಂದಾ, ಎರಡಾ!]
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ದಾಖಲೆಯ ತ್ರಿಶತಕ ಬಾರಿಸಿದ ಕರುಣ್ ನಾಯರ್ ಅವರಿಗೂ ಕರ್ನಾಟಕ ತಂಡ ಸೇರಲು ಎರಡು ದಿನ ಮಾತ್ರ ಕಾಲಾವಕಾಶವಿದೆ. ವಿಶಾಖಪಟ್ಟಣದಲ್ಲಿ ಡಿಸೆಂಬರ್ 23ರಿಂದ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.
ಎಂಟು ಬಾರಿಯ ಚಾಂಪಿಯನ್ ತಂಡದಲ್ಲಿ ಕೆಎಲ್ ರಾಹುಲ್, ಕರುಣ್, ಮನೀಶ್ ಆಗಮನದಿಂದ ಅರ್ಜುನ್ ಹೊಯ್ಸಳ, ರೋನಿತ್ ಮೋರೆ, ಪ್ರಸಿದ್ಧ್ ಎಂ ಕೃಷ್ಣ ತಂಡದಿಂದ ಹೊರಗುಳಿದಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾ ಟೆಸ್ಟ್ ಬ್ಯಾಟ್ಸ್ಮನ್ ಮುರಳಿ ವಿಜಯ್ ಮತ್ತು ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ತಮಿಳುನಾಡು ತಂಡಕ್ಕೆ ಕರೆಸಿಕೊಳ್ಳಲಾಗಿದೆ.[ತ್ರಿಶತಕ ಕ್ಲಬ್: ಸೆಹ್ವಾಗ್ ಜತೆ ಸೇರಿಕೊಂಡ ಕರುಣ್ ನಾಯರ್!]
ಕರ್ನಾಟಕ ತಂಡ: ವಿನಯ್ ಕುಮಾರ್(ನಾಯಕ), ಕರುಣ್ ನಾಯರ್(ಉಪನಾಯಕ), ಕೆಎಲ್ ರಾಹುಲ್, ಆರ್ ಸಮರ್ಥ್, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ, ಮಿರ್ ಕೌನೇನ್ ಅಬ್ಬಾಸ್, ಸಿಎಂ ಗೌತಮ್(ವಿಕೆಟ್ ಕೀಪರ್), ಅಭಿಮನ್ಯು ಮಿಥುನ್, ಎಸ್. ಅರವಿಂದ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ಅಬ್ರಾರ್ ಕಾಜಿ, ಡೇವಿಡ್ ಮಥಾಯಿಸ್, ಮಯಾಂಕ್ ಅಗರ್ವಾಲ್.
ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಸಹಾಯಕ ಕೋಚ್: ಮನ್ಸೂರ್ ಅಲಿ ಖಾನ್
ಡಿಸೆಂಬರ್ 23ರಿಂದ 27ರ ತನಕ ವಿಶಾಖಪಟ್ಟಣಂನಲ್ಲಿ ಪಂದ್ಯ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)