ಮುಂಬೈ, ಜುಲೈ 01: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಕೈತಪ್ಪಿದ ಬಳಿಕ ಗರಂ ಆಗಿರುವ ಮಾಜಿ ಕ್ರಿಕೆಟರ್ ರವಿಶಾಸ್ತ್ರಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕ್ರಿಕೆಟ್ ಸಮಿತಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಐಸಿಸಿ ಕ್ರಿಕೆಟ್ ಸಮಿತಿಗೆ ಟೀಂ ಇಂಡಿಯಾದ ಹಾಲಿ ಕೋಚ್ ಅನಿಲ್ ಕುಂಬ್ಳೆ ಅವರು ಅಧ್ಯಕ್ಷರಾಗಿದ್ದಾರೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ರೇಸ್ ನಲ್ಲಿದ್ದ ರವಿಶಾಸ್ತ್ರಿ ಅವರು ಮುಂಚೂಣಿಯಲ್ಲಿದ್ದರು. ಆದರೆ, ರವಿಶಾಸ್ತ್ರಿ ಅವರ ಬದಲಿಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರು ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. [ಟೀಂ ಇಂಡಿಯಾ ಕೋಚ್ ಕುಂಬ್ಳೆ ಕನ್ನಡದಲ್ಲಿ ಉತ್ತರಿಸಿದಾಗ]
ಆದರೆ, ಕುಂಬ್ಳೆ ಅವರು ಇರುವ ಕಾರಣ, ಸಮಿತಿಯಿಂದ ಹೊರಬಂದಿಲ್ಲ, ಈ ಹಿಂದೆಯೇ ಐಸಿಸಿ ಸಮಿತಿಯಿಂದ ಹೊರಬರುವುದಾಗಿ ರವಿಶಾಸ್ತ್ರಿ ಅವರು ಹೇಳಿದ್ದರು ಎಂಬ ಸುದ್ದಿ ಇದೆ. ಈ ಬಗ್ಗೆ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಅವರಿಗೂ ತಿಳಿಸಲಾಗಿತ್ತು. ಹೀಗಾಗಿ ಲಾರ್ಡ್ಸ್ ನಲ್ಲಿ ಜೂನ್ ತಿಂಗಳ ಮೊದಲ ವಾರ ನಡೆದ ಸಭೆಗೆ ರವಿಶಾಸ್ತ್ರಿ ಅವರು ಹಾಜರಾಗಿರಲಿಲ್ಲ.[ಟೀಂ ಇಂಡಿಯಾಕ್ಕೆ ಕುಂಬ್ಳೆ ಗುರು, ಬೆಂಗಳೂರಲ್ಲಿ ಅಭ್ಯಾಸ ಶುರು]
ಇದಾದ ಬಳಿಕ ಬಿಸಿಸಿಐ ಕೋಚ್ ಹುದ್ದೆಗೆ ಆಹ್ವಾನಿಸಲಾಯಿತು. ಸುಮಾರು 18 ತಿಂಗಳುಗಳ ಕಾಲ ತಂಡದೊಡನೆ ಇದ್ದ ರವಿಶಾಸ್ತ್ರಿ ಅವರು ಎಲ್ಲರಂತೆ ಅರ್ಜಿ ಗುಜರಾಯಿಸಿದ್ದರು. ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಸ್ಥಾನ ತಪ್ಪಿದ್ದರಿಂದ ರವಿಶಾಸ್ತ್ರಿ ಅವರು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ ವಿರುದ್ದ ಕಿರಿಕಾರಿದ್ದನ್ನು ಮರೆಯುವಂತಿಲ್ಲ.