ಬೆಂಗಳೂರು, ಜುಲೈ 14: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಆರನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ತನ್ನ ಅಂತಿಮ ತೀರ್ಪು ನೀಡಿದೆ.ಇದರ ಬೆನ್ನಲ್ಲೇ ಚೆನ್ನೈ, ರಾಜಸ್ಥಾನ ತಂಡದ ಭವಿಷ್ಯದ ಪ್ರಶ್ನೆ ಕಾಡುತ್ತಿದೆ.
ಚೆನ್ನೈ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್ ನಿಂದ 2 ವರ್ಷ ನಿಷೇಧ ಹೇರಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅದರೆ, ಅಮಾನತುಗೊಂಡರೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಂದಿನ ಎರಡು ಐಪಿಎಲ್ ಟೂರ್ನಿಯಲ್ಲೂ ಭಾಗವಹಿಸುವ ಮಾರ್ಗ ಇದೆ. [ಚೆನ್ನೈ, ರಾಜಸ್ಥಾನ್ ತಂಡಕ್ಕೆ 2 ವರ್ಷ ನಿಷೇಧ]
ಜುಲೈ 14 ರ ಮಧ್ಯಾಹ್ನ ಆರ್ ಎಂ ಲೋಧಾ ನಿವೃತ್ತ ನ್ಯಾ. ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿದ ವರದಿಯಂತೆ ಚೆನ್ನೈ ಹಾಗೂ ರಾಜಸ್ಥಾನ ತಂಡಗಳು 2016 ಹಾಗೂ 2017 ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ, ಕ್ರಿಕೆಟ್ ಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಯಲ್ಲೂ ಪಾಲ್ಗೊಳ್ಳುವಂತಿಲ್ಲ.[ಐಪಿಎಲ್ ಹಗರಣ ತೀರ್ಪು, ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ]
ಚೆನ್ನೈ ತಂಡದ ಪ್ರಮುಖರಾದ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ್ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ ಅವರು 2013ರ ಐಪಿಎಲ್ ನಲ್ಲಿ ಬೆಟ್ಟಿಂಗ್ ನಡೆಸಿ ಪಂದ್ಯದಲ್ಲಿ ಕಳ್ಳಾಟ ಆಡಿರುವುದು ಸಾಬೀತಾಗಿದೆ. ಹೀಗಾಗಿ ಇಬ್ಬರಿಗೂ ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಲಾಗಿದೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
ಅದರೆ, ಎರಡು ತಂಡಗಳಿಗೂ ಒಂದು ಹಿಂಬಾಗಿಲ ಮಾರ್ಗವಿದೆ. ಎರಡು ತಂಡಗಳು ಒಂದಕ್ಕಿಂತ ಹೆಚ್ಚಿನ ಮಾಲೀಕರನ್ನು ಹೊಂದಿದೆ. ಇಲ್ಲಿ ತಂಡದ ಮಾಲೀಕರ ಮೇಲೆ ಮಾತ್ರ ನಿಷೇಧ, ಅಮಾನತು ಅನ್ವಯವಾಗುತ್ತದೆ. ಐಪಿಎಲ್ ನಿಯಮಾವಳಿಗಳ ಪ್ರಕಾರ ತಂಡದ ಮಾಲೀಕರನ್ನು ಬದಲಾಯಿಸಿ ಕಣಕ್ಕಿಳಿಯಲು ಯಾವುದೇ ಅಡ್ಡಿ ಅತಂಕಗಳಿಲ್ಲ.
ಇಂಡಿಯಾ ಸಿಮೆಂಟ್ಸ್ ಮಾಲೀಕತ್ವದ ಸಿಎಸ್ ಕೆ ಹಾಗೂ ಜೈಪುರ ಐಪಿಎಲ್ ಕ್ರಿಕೆಟ್ ಪ್ರೈ ಲಿ ಮಾಲೀಕತ್ವದ ರಾಜಸ್ಥಾನ ತಂಡಗಳು ಅದೇ ಹೆಸರಿನಲ್ಲಿ ಕಣಕ್ಕಿಳಿಯುವಂತಿಲ್ಲ. "ಎರಡು ತಂಡದ ಆಟಗಾರರು ಆಡಲು ಯಾವುದೇ ಅಡ್ಡಿಯಿಲ್ಲ" ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಹೀಗಾಗಿ ಹೊಸ ಹೆಸರು, ಹೊಸ ಮಾಲೀಕರೊಡನೆ ತಂಡ ಕಣಕ್ಕಿಳಿಯುವ ಅವಕಾಶವಿದೆ. ಧೋನಿ ಅವರು ಚೆನ್ನೈ ತಂಡವನ್ನು ಮುನ್ನಡೆಸಬಹುದು.ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಇನ್ನೂ ನೀಡಿಲ್ಲ. (ಒನ್ ಇಂಡಿಯಾ ಸುದ್ದಿ)