ನವದೆಹಲಿ, ಅಕ್ಟೋಬರ್. 19 : ಜ್ವರದಿಂದ ಬಳಲುತ್ತಿರುವ ಸುರೇಶ್ ರೈನಾ ಮಂಗಳವಾರ ಮಧ್ಯಾಹ್ನ ಕೋಟ್ಲಾ ಮೈದಾನದಲ್ಲಿ ನೆಟ್ಸ್ ನಲ್ಲಿ ಸುಮಾರು 45 ನಿಮಿಷಗಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆದರೆ ಆಯಾಸದಿಂದ ಮೈದಾನದಿಂದ ಹೊರ ನಡೆದರು.
ಜ್ವರದಿಂದ ಬಳಲುತ್ತಿರುವ ಅವರನ್ನು ಧರ್ಮಶಾಲಾದಲ್ಲಿ ನಡೆದಿದ್ದ ಮೊದಲ ಪಂದ್ಯದಿಂದಲೂ ಕೈಬಿಡಲಾಗಿತ್ತು. ಇನ್ನು ಅವರಿಗೆ ಫಿಟ್ ನೆಸ್ ಕೊರತೆ ಕಾಡುತ್ತಿದೆ. ಇದಿರಂದ ಅಕ್ಟೋಬರ್ 20 (ಗುರುವಾರ)ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಎರಡನೇ ಪಂದ್ಯಕ್ಕೂ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಿಳಿಸಿದೆ. [ಕಿವೀಸ್ ವಿರುದ್ಧದ ಮೊದಲ ಒಡಿಐಗೆ ರೈನಾ ಅಲಭ್ಯ!]
ಅಕ್ಟೋಬರ್ 6 ರಿಂದ ಹೈದರಾಬಾದ್ನಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ತಂಡಗಳ ನಡುವಣ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಅವರು ಆಡಬೇಕಿತ್ತು. ಆ ಸಂದರ್ಭದಲ್ಲಿಯೇ ವೈರಲ್ ಜ್ವರದಿಂದ ಬಳಲಿದ್ದ ಅವರು ಮನೆಗೆ ಮರಳಿದ್ದರು.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಏಕದಿನ ಪಂದ್ಯದಲ್ಲಿ ಅವರು ಆಡಿದ್ದರು. ಅದರ ನಂತರ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ನ್ಯೂಜಿಲೆಂಡ್ ಎದುರಿನ ಮೊದಲ ಮೂರು ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ಆದರೆ ದುರದೃಷ್ಟ ಅವರಿಗೆ ಜ್ವರ ಎಡಬಿಡದೆ ಕಾಡುತ್ತಿರುವುದರಿಂದ ಎರಡು ಏಕದಿನ ಪಂದ್ಯಗಳಿಂದ ದೂರ ಉಳಿಯಬೇಕಾಯಿತು.