ಬೆಂಗಳೂರು, ಜೂ.14: ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ಕ್ರಿಕೆಟ್ ಪ್ರೇಮದ ಬಗ್ಗೆ ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ ಸುದೀಪ್ ಅವರ ತಂಡ ಭರ್ಜರಿ ಯಶಸ್ಸುಗೊಳಿಸಿದೆ.ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಸುದೀಪ್, ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ತಂಡವೊಂದನ್ನು ಖರೀದಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನ ತಂಡಗಳನ್ನು ಹಿಂದಿ ಚಿತ್ರರಂಗದ ಶಾರುಖ್ ಖಾನ್, ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ ಹೊಂದಿರುವುದು ಎಲ್ಲರಿಗೂ ಗೊತ್ತಿದೆ. ಐಪಿಎಲ್ ಮಾದರಿಯಲ್ಲೇ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆರಂಭಿಸಿರುವ ಕೆಪಿಎಲ್ ಟ್ವೆಂಟಿ 20 ಟೂರ್ನಿಗೆ ಈಗ ಸ್ಟಾರ್ ನಟನ ಎಂಟ್ರಿಯಾಗುತ್ತಿದೆ. [ಕಿಚ್ಚ ಸುದೀಪ್ ರಾಕ್ ಸ್ಟಾರ್ಸ್ ತಂಡ]
ಕಳೆದ ವರ್ಷದ ಕೆಪಿಎಲ್ ಟೂರ್ನಿಯ ಅಂತ್ಯಕ್ಕೆ ಕಿಚ್ಚ ಸುದೀಪ್ ಅವರ ಸಿಸಿಎಲ್ ತಂಡವಾದ ಕರ್ನಾಟಕ ಬುಲ್ಡೋಜರ್ಸ್ ಕೂಡಾ ಕೆಪಿಎಲ್ ತಂಡದೊಂದಿಗೆ ಸೆಣಸಾಡಿತ್ತು. ಅದರೆ, ಈಗ ಸುದೀಪ್ ಅವರು ಹೊಸ ತಂಡವನ್ನು ಖರೀದಿಸಿ ಅದಕ್ಕೆ ಶಿವಮೊಗ್ಗ ಜಿಲ್ಲೆ ಹೆಸರಿಡುವ ಮನಸ್ಸು ಮಾಡಿದ್ದಾರಂತೆ ಎಂದು ಬೆಂಗಳೂರ್ ಮಿರರ್ ವರದಿ ಮಾಡಿದೆ.[ಕೆಪಿಎಲ್ 2014: ಟೂರ್ನಿ ಬಗ್ಗೆ ಎಬಿಸಿಡಿ]
ಕರ್ನಾಟಕ ಪ್ರಿಮಿಯರ್ ಲೀಗ್ ಭರ್ಜರಿಯಾಗಿ ಆರಂಭಗೊಂಡರೂ ನಂತರ ಮೂರು ವರ್ಷ ಟೂರ್ನಿ ನಡೆದಿರಲಿಲ್ಲ. ಕಳೆದ ವರ್ಷ ದಿವಂಗತ ಶ್ರೀಕಂಠದತ್ತ ಒಡೆಯರ್ ಸ್ಮರಣಾರ್ಥ ಒಡೆಯರ್ ಕೆಪಿಎಲ್ ಕಪ್ ಕೆಎಸ್ ಸಿಎ ಆಯೋಜಿಸಿತ್ತು. [ಮೈಸೂರು ವಾರಿಯರ್ಸ್ ಕೆಪಿಎಲ್ ಚಾಂಪಿಯನ್]
ಈ ಮುಂಚೆ ಇದ್ದ ಮಲ್ನಾಡ್ ಗ್ಲಾಡಿಯೇಟರ್ಸ್ ತಂಡ ಕಳೆದ ಕೆಪಿಎಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಶಿವಮೊಗ್ಗ ಹಾಗೂ ಮಲೆನಾಡು ಭಾಗ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಸುದೀಪ್ ಅವರು ತಂಡ ಕಟ್ಟುತ್ತಿದ್ದಾರೆ ಎನ್ನಲಾಗಿದೆ.ಅದರೆ, ಸುದೀಪ್ ತಂಡಕ್ಕೆ ಸೂಕ್ತ ಪ್ರೋತ್ಸಾಹಕರು, ಹೂಡಿಕೆದಾರರು ಬೇಕಿದ್ದಾರೆ.
ವೃತ್ತಿಪರ ಕ್ರಿಕೆಟರ್ಸ್ ಸಮಕ್ಕೆ ಆಡಲು ಸಿಸಿಎಲ್ ತಂಡಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನು ಒಪ್ಪಿಕೊಂಡ ಸುದೀಪ್ ಅವರು ಬ್ರಿಜೇಶ್, ರೋಜರ್ ಬಿನ್ನಿ ಅವರ ಒತ್ತಾಯಕ್ಕೆ ಮಣಿದು ಸಿಸಿಎಲ್ ತಂಡ ಕೂಡಾ ಕೆಪಿಎಲ್ ನಲ್ಲಿ ಆಡಿತ್ತು. [ಕೆಪಿಎಲ್ : ಕಿಚ್ಚನ ಹುಡ್ಗರಿಗೆ ಹೀನಾಯ ಸೋಲು]
ಈ ಬಾರಿ ಸಿಸಿಎಲ್ ತಂಡ ಆಡಿಸುವುದು ಬಿಡುವುದು ಕೆಎಸ್ ಸಿಎಗೆ ಬಿಟ್ಟಿದ್ದು ಎಂದು ಸುದೀಪ್ ಹೇಳಿದ್ದಾರೆ. ಕೆಪಿಎಲ್ ಹೊಸ ತಂಡಗಳ ಟೆಂಡರ್, ಹರಾಜು ಬಗ್ಗೆ ವಿವರಗಳು ಪ್ರಕಟವಾದರೆ ಸುದೀಪ್ ಅವರ ಹೊಸ ತಂಡದ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.