ಮೈಸೂರು, ಸೆ.25: ಮೈಸೂರು ಮೂಲದ ಕರ್ನಾಟಕದ ಎಡಗೈ ಸ್ಪಿನ್ನರ್ ಜಗದೀಶ್ ಸುಚಿತ್ ಅವರ ಮಾರಕ ಹಾಗೂ ನಾಯಕ ಸಿಎಂ ಗೌತಮ್ ಅವರ ಆಕರ್ಷಕ ಆಟದ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ 'ಎ' ವಿರುದ್ಧ ಕರ್ನಾಟಕ ಅರ್ಹ ಜಯ ದಾಖಲಿಸಿದೆ.
ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್) ಮೈದಾನದಲ್ಲಿ 3ನೇ ಹಾಗೂ ಅಂತಿಮ ದಿನ ಗೆಲುವಿಗೆ 181 ರನ್ ಸವಾಲು ಪಡೆದ ಆತಿಥೇಯ ಕರ್ನಾಟಕ ತಂಡ, 40.5 ಓವರ್ಗಳಲ್ಲಿ 6 ವಿಕೆಟ್ಗೆ 185 ರನ್ಗಳಿಸಿ ಜಯ ಗಳಿಸಿತು. ಈ ಜಯದ ಮೂಲಕ ಅಕ್ಟೋಬರ್ 1 ರಿಂದ ಅರಂಭವಾಗಲಿರುವ ಈ ಬಾರಿಯ ರಣಜಿ ಋತುವಿಗೆ ಉತ್ತಮ ಅಭ್ಯಾಸವನ್ನು ಕರ್ನಾಟಕ ತಂಡ ಪಡೆದುಕೊಂಡಿತು.
ಪ್ರವಾಸಿ ಬಾಂಗ್ಲಾದೇಶ ಎ ವಿರುದ್ಧ ನಡೆದ ಮೂರು ದಿನಗಳ ಪಂದ್ಯದಲ್ಲಿ ಸ್ಪಿನ್ನರ್ ಸುಚಿತ್ 60ಕ್ಕೆ 6 ವಿಕೆಟ್ ಪಡೆದರೆ, ಗೌತಮ್ 49 ರನ್ (35 ಎಸೆತ, 10X4) ಗಳಿಸಿ ಜಯಕ್ಕೆ ತಮ್ಮ ಕೊಡುಗೆ ನೀಡಿದರು.
ಬಾಂಗ್ಲಾ ಮೊದಲ ಇನಿಂಗ್ಸ್ 158 ರನ್ಗಳಿಸಿದರೆ, ಪ್ರತಿಯಾಗಿ ಕರ್ನಾಟಕ 287ರನ್ ಪೇರಿಸುವ ಮೂಲಕ 129ರನ್ ಮುನ್ನಡೆ ಗಳಿಸಿತ್ತು. ಗುರುವಾರ ಅಂತಿಮ ದಿನದಂದು 3 ವಿಕೆಟ್ಗೆ 188 ರನ್ಗಳಿಂದ ಆಟ ಆರಂಭಿಸಿದ ಪ್ರವಾಸಿ ಬಾಂಗ್ಲಾ, 309 ರನ್ಗೆ ಎರಡನೇ ಇನಿಂಗ್ಸ್ ಮುಗಿಸಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ಆರ್. ಸಮರ್ಥ್ (1) ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತು. ಇದರ ಬೆನ್ನಲ್ಲೆ ರಾಬಿನ್ ಉತ್ತಪ್ಪ (3) ಕೂಡ ನಿರಾಸೆ ಮೂಡಿಸಿದರು.. ಮಯಾಂಕ್ ಅಗರ್ವಾಲ್ (23) ಹಾಗೂ ನಾಯಕ ಸಿ.ಎಂ. ಗೌತಮ್ ಮೂರನೇ ವಿಕೆಟ್ಗೆ 60 ರನ್ ಪೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಅಭಿಷೇಕ್ ರೆಡ್ಡಿ 36 ರನ್ ಶಿಶಿರ್ ಭವಾನಿ 24 ರನ್ ಹಾಗೂ ಶ್ರೇಯಸ್ ಗೋಪಾಲ್ ಅಜೇಯ 40 ರನ್ ಗಳಿಸಿ ಜಯಕ್ಕೆ ಕಾರಣರಾದರು.
ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಾದ ಶಿಶಿರ್ ಭವಾನೆ, ಜೆ ಸುಚಿತ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಆಟವನ್ನು ನಾಯಕ ಗೌತಮ್ ಹೊಗಳಿದರು.