ಬೆಂಗಳೂರು, ಜ. 5: ಖ್ಯಾತ ಕ್ರಿಕೆಟ್ ಕ್ರೀಡಾಂಗಣವಾದ ಚಿನ್ನಸ್ವಾಮಿಯಲ್ಲಿ ಅಳವಡಿಸಲಾಗಿರುವ ನೂತನ ಸಬ್ ಏರ್ ಸಿಸ್ಟಂ ವ್ಯವಸ್ಥೆಯನ್ನು ಬುಧವಾರ (ಜ. 4) ಸಂಜೆ ಲೋಕಾರ್ಪಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ, ಕ್ರೀಡಾಂಗಣದ ಮೈದಾನದಲ್ಲಿ ಪರಿಚಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಅಂದಹಾಗೆ, ಈ ತಂತ್ರಜ್ಞಾನ ಅಳವಡಿಸುತ್ತಿರುವ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣ ಇದಾಗಿದೆ.
ಹೊಸ ತಂತ್ರಜ್ಞಾನದಿಂದಾಗಿ, ಮಳೆಯಿಂದ ಕ್ರಿಕೆಟ್ ಪಂದ್ಯಗಳು ರದ್ದಾಗುವ ಭೀತಿಗೆ ಪೂರ್ಣವಿರಾಮ ಬೀಳಲಿದೆ. ಅಮೆರಿಕ ಮೂಲದ ತಂತ್ರಜ್ಞಾನದಿಂದಾಗಿ, ಮೈದಾನದಲ್ಲಿ ಬಿದ್ದ ಮಳೆಯ ನೀರು ಅಲ್ಲಿ ನಿಲ್ಲದಂತೆ ಮಾಡುತ್ತದಲ್ಲದೆ, ಕೆಲವೇ ನಿಮಿಷಗಳಲ್ಲಿ ಆಟ ಮುಂದುವರಿಸಲು ಸಹಾಯ ಮಾಡುತ್ತದೆ.
ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಪರಿಚಯ ಭಾಷಣ ಮಾಡಿದ ಕರ್ನಾಟಕ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಗೌರವ ಕಾರ್ಯದರ್ಶಿ ಸುಧಾಕರ್ ರಾವ್, ಮಳೆ ಬಂದ ಕೂಡಲೇ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸಬ್ ಏರ್ ಸಿಸ್ಟಂ ಸ್ವಯಂಚಾಲಿತವಾಗಿ ನೀರನ್ನು ಬೇಗನೇ ಹೊರಹಾಕಲು ಆರಂಭಿಸುತ್ತದೆ. ಗುರುತ್ವಾಕರ್ಷಣೆ ಸಹಾಯದಿಂದ ಹೀರಲ್ಪಡುವ ವಿಧಾನಕ್ಕೂ 36 ಪಟ್ಟು ವೇಗವಾಗಿ ನೀರನ್ನು ಹೀರಿ ಹೊರಹಾಕಲಾಗುತ್ತದೆ ಎಂದರು. ನಿಮಿಷಕ್ಕೆ ಸುಮಾರು 10 ಸಾವಿರ ಲೀಟರ್ ಗಳಷ್ಟು ನೀರನ್ನು ಹೊರಹಾಕುವ ಸಾಮರ್ಥ್ಯವಿದೆ ಎಂದೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್ ಸಿಎ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ, "ಈ ತಂತ್ರಜ್ಞಾನವು ಕೆಎಸ್ ಸಿಎಗೆ ಹೆಚ್ಚಿನ ಆರ್ಥಿಕ ಲಾಭ ತರಲಿದೆ. ಮಳೆಯಿಂದಾಗಿ ಪ್ರೇಕ್ಷಕರಿಗೆ ಆಗುವ ನಿರಾಸೆ ಹಾಗೂ ಪ್ರಾಯೋಕತ್ವದಿಂದ, ನೇರಪ್ರಸಾರ ಹಕ್ಕುದಾರರಿಂದ ಆಗುವ ಮಿಲಿಯನ್ ಡಾಲರ್ ಗಟ್ಟಲೆ ನಷ್ಟ ಅನುಭವಿಸುವುದನ್ನು ತಪ್ಪಿಸುತ್ತದೆ" ಎಂದು ಅವರು ತಿಳಿಸಿದರು.
ಕ್ರೀಡಾಂಗಣದ ಹುಲ್ಲುಹಾಸನ್ನು ನವೀಕರಣಗೊಳಿಸಲಾಗಿದೆ ಎಂದ ಅವರು, 10 ಸಾವಿರ ಟನ್ ಮಣ್ಣನ್ನು ಹೊರಹಾಕಲಾಗಿದ್ದು, ಗ್ರೇಡಿಂಗ್, ಕಂಪ್ಯಾಷನ್, ಜಿಯೊ ಟೆಕ್ಸ್ ಟೈಲ್ ಅಳವಡಿಕೆ, ಟ್ರೆಂಜಿಂಗ್, 150 ಎಂಎಂನಿಂದ 800 ಎಂಎಂ ವ್ಯಾಸದ ಪರ್ಫೊರೇಟೆಡ್ ಪೈಪ್ ಲೈನ್ ಗಳ ಅಳವಡಿಕೆ ಇವೆಲ್ಲವನ್ನೂ ಸಬ್ ಏರ್ ಸಿಸ್ಟಂನ ಪ್ರಧಾನ ಅಂಗವಾಗಿ ಅಳವಡಿಸಲಾಗಿದ್ದು, ಮೈದಾನದ ಮೇಲೆ ಬರ್ಮಡಾ ಹುಲ್ಲನ್ನು ಬಳೆಸಲಾಗಿದೆ ಎಂದರು.
ಕ್ರೀಡಾಂಗಣದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿರುವ ಏಷ್ಯಾ ಕ್ರೀಡಾ ಸೌಕರ್ಯ ಪ್ರದಾನ ಸಂಸ್ಥೆಯಾದ ಸಬ್ ಏರ್ ನ ಹಿರಿಯ ಉಪಾಧ್ಯಕ್ಷ ಕೆವಿನ್ ಕ್ರೊವ್ ಮಾತನಾಡಿ, "ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸಬ್ ಏರ್ ವ್ಯವಸ್ಥೆಯು ಹುಲ್ಲಿನ ಬೇರು ಹಾಗೂ ಅದರ ಮೇಲಿನ ತಂಪನ್ನು ಕಾಪಾಡುತ್ತದೆ. ಇದರ ಜತೆಗೇ ಮಣ್ಣಿನ ಲವಣಾಂಶ, ಉಷ್ಣತೆ, ತೇವಾಂಶ ಅಳೆಯಲು ಸಾಧ್ಯವಾಗಿದೆ" ಎಂದರು.