ತಮ್ಮ ಒಡೆತನದ ಸಮೂಹ ಸಂಸ್ಥೆಗಳು ಬ್ಯಾಂಕ್ ದಿವಾಳಿ ಹಾದಿ ಹಿಡಿದಿದ್ದರೂ, ಆರ್ಸಿಬಿ ತಂಡಕ್ಕೆ ಮಾತ್ರ ವಿಜಯ್ ಮಲ್ಯ ಚೆನ್ನಾಗಿ ನೀರೆರೆದು ಪೋಷಿಸುತ್ತಿದ್ದಾರೆ. ಐಪಿಎಲ್ ಎಂಟನೇ ಆವೃತ್ತಿಯ ದಿನಗಣನೆಯ ನಡುವೆ ತಂಡಕ್ಕೆ ಮಹಿಳಾ ಶಕ್ತಿಯ ಪ್ರೇರಣೆ ನೀಡಲು ವಿಜಯ್ ಮಲ್ಯ ಮುಂದಾಗಿದ್ದಾರೆ ಎನ್ನುವ ಸುದ್ದಿಯಿದೆ.
ಈಗಾಗಲೇ ಮೂವರು ಮಹಿಳೆಯರು ಐಪಿಎಲ್ ನಲ್ಲಿ ಪಾಲುದಾರರಾಗಿ ಸಕ್ರಿಯರಾಗಿರುವಾಗ (ಪ್ರೀತಿ, ಶಿಲ್ಪಾ, ನೀತೂ) ತನ್ನ ತಂಡಕ್ಕೂ ಮಹಿಳೆಯೊಬ್ಬರನ್ನು ನೇಮಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿರುವ ಮಲ್ಯ ಸಾಹೇಬ್ರು, ತಂಡದ ಪ್ರಧಾನ ಕೋಚ್ ಆಗಿ ಕ್ರಿಕೆಟೇತರ ಮಹಿಳೆಯೊಬ್ಬರನ್ನು ಆಯ್ಕೆ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ಆರ್ಸಿಬಿ ಅಧಿಕಾರಿಗಳು, ಆಡಳಿತ ಮಂಡಳಿ, ನಾಯಕ, ತರಬೇತುದಾರ, ಹಿತೈಷಿಗಳ ಜೊತೆ ಹಲವು ಸುತ್ತಿನ ಚರ್ಚೆ ನಡೆಸಿರುವ ಮಲ್ಯಗೆ ಎಲ್ಲರ ಒಕ್ಕೂರಿಲಿನ ಬೆಂಬಲ ಸಿಕ್ಕಿದೆ ಎನ್ನಲಾಗುತ್ತಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಲು ಮಲ್ಯ ಮುಂದಾಗಿದ್ದಾರೆ.
ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲಿ ಜಾಹೀರಾತು ಜಗತ್ತಿನ ಮಹಿಳಾ ಸೆಲೆಬ್ರಿಟಿಗಳನ್ನು ವರ್ಣರಂಜಿತವಾಗಿ ತೋರಿಸುವ ಮಲ್ಯ, ಪ್ರಧಾನ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಮಾತ್ರ ತನ್ನ ಏಕಮೇವ ಸುಪುತ್ರ ಸಿದ್ದಾರ್ಥ ಮಲ್ಯರನ್ನು ದೂರವಿಡಲು ನಿರ್ಧರಿಸಿದ್ದಾರಂತೆ!
ತಂದೆಯ ನಿರ್ಧಾರದಿಂದ ಸಿಟ್ಟಾಗಿರುವ ಸಿದ್ದಾರ್ಥ್, ಐಪಿಎಲ್ ಟೂರ್ನಿ ಬಹಿಷ್ಕರಿಸಿ ವೆಸ್ಟ್ ಇಂಡೀಸ್ ಬೀಚ್ ನಲ್ಲಿ ಕಾಲಕಳೆಯಲು ನಿರ್ಧಾರಿಸಿದ್ದಾರೆ ಎನ್ನುವ ಸುದ್ದಿ ಯುಬಿಸಿಟಿ ಪಡಶಾಲೆಯಲ್ಲಿ ಹರಿದಾಡುತ್ತಿದೆ.
ಆರ್ಸಿಬಿ ತಂಡಕ್ಕೆ ಪ್ರಧಾನ ಆಧಾರಸ್ಥಂಭವಾಗಿರುವ ನಾಯಕ ಕಮ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಸಂತುಷ್ಟಗೊಳಿಸಲು ತೀರ್ಮಾನಿಸಿರುವ ಮಲ್ಯ, ಮಹಿಳಾ ಕೋಚ್ ಪ್ರಕ್ರಿಯೆಯಲ್ಲಿ ಕೊಹ್ಲಿ ನುಡಿದಂತೆ ನಡೆಯಲು ನಿರ್ಧರಿಸಿದ್ದಾರೆ.
ಈ ಹಿಂದೆ ತಂಡದ ಪರವಾಗಿ ಬ್ರಾಂಡ್ ಅಂಬಾಸಿಡರ್ ಆಗಿದ್ದ ಕತ್ರಿನಾ ಕೈಫ್ ಅಥವಾ ಲಕ್ಕಿಸ್ಟಾರ್ ರಮ್ಯಾ ಅವರ ಹೆಸರನ್ನು ಕೋಚ್ ಹುದ್ದೆಗೆ ಪರಿಗಣಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ.
ಈಗ ತಾನೇ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟಿರುವ ರಮ್ಯಾ, ಮಂಡ್ಯದಲ್ಲಿ ಹಾಯಾಗಿ ಇದ್ದು ರಾಜಕೀಯ ಮಾಡಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಈ ಪಟ್ಟಿಯಲ್ಲಿ ರಮ್ಯಾ ಇರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.
ಮಲ್ಯ ಒಡೆತನದ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವ ಮುನ್ನ ಮಗ ಸಿದ್ದಾರ್ಥ ಮಲ್ಯ ಜೊತೆ ಫ್ರೀಬರ್ಡ್ ಹಾಗೇ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿದ್ದ ಡಿಂಪಲ್ ಚೆಲುವೆ, ದೀಪಿಕಾ ಪಡುಕೋಣೆ ಮಾತ್ರ ಮಲ್ಯ ಅವರ #MyChoice ಅಲ್ಲ ಎನ್ನುವ ಸುದ್ದಿ ಮಾತ್ರ ಸದ್ಯಕ್ಕೆ ಸಿಕ್ಕಿದೆ.
ಇನ್ನು ಕೆಲವು ದಿನಗಳ ಹಿಂದೆ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಿದರೆ ಎಡವಟ್ಟಾಗುವ ಸಾಧ್ಯತೆ ಇಲ್ಲದಿಲ್ಲ. ಹಾಗಾಗಿ ಆಕೆಯ ಹೆಸರು ಕೂಡಾ ಬೇಡ ಎನ್ನುವ ಬುದ್ದಿವಂತ ನಡೆಯನ್ನು ಮಲ್ಯ ಇಟ್ಟಿದ್ದಾರೆ ಎನ್ನುವ ಖಚಿತ ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ತಾನು ಬಹಳವಾಗಿ ಹಚ್ಚಿಕೊಂಡಿರುವ ಅನುಶ್ಕಾ ಶರ್ಮಾ ಅವರನ್ನು ಆಯ್ಕೆ ಮಾಡಿದರೆ ಹೇಗೆ, ಹೇಗೂ ಆಕೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದದ್ದು. ಇದರಿಂದ ಕರ್ನಾಟಕದ ಆಟಗಾರರು ತಂಡದಲ್ಲಿ ಇಲ್ಲದಿದ್ದರೂ, ಕನ್ನಡಿಗರ ಬೆಂಬಲ ಪಡೆಯಬಹುದು ಎಂದು ಕೊಹ್ಲಿ, ಮಲ್ಯ ಅವರ ಕಿವಿ ಊದಿದ್ದಾರೆ ಎನ್ನುವ ಸುದ್ದಿಯಿದೆ.
ಆದರೆ, ಅನುಶ್ಕಾ ಪೆವಲಿಯನ್ ನಲ್ಲಿದ್ದರೆ ಕೊಹ್ಲಿ ಕ್ರೀಸ್ ನಲ್ಲಿ ಹೆಚ್ಚಾಗಿ ಇರದಿರುವ ಉದಾಹರಣೆ ಏಕದಿನ ಕ್ರಿಕೆಟ್ ನಲ್ಲಿ ಇರುವುದರಿಂದ ಕೊಹ್ಲಿ ರೆಕಮಂಡೇಶನ್ ಮಲ್ಯಗೆ ಸಹ್ಯವಾಗುತ್ತಿಲ್ಲ. ಆದರೂ ಕೊಹ್ಲಿ ಮಾತನ್ನು ತಳ್ಳಿಹಾಕಲಾರದೇ, ಮಲ್ಯಗೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಟ್ಟಿನಲ್ಲಿ ಅನುಶ್ಕಾ ಶರ್ಮಾನಾ ಅಥವಾ ಕತ್ರಿನಾ ಕೈಫಾ ಯಾರೇ ಆಗಿರಲಿ. ಈ ಬಗ್ಗೆ ನಮ್ಮ ಓದುಗರು ಯಾರೂ ಈ ಬಗ್ಗೆ ನಶೆ ಏರಿಸಿಕೊಳ್ಳುವ ಅವಶ್ಯಕತೆಯಿಲ್ಲ ಎನ್ನುವುದು ನಮ್ಮ ಮನವಿ. ಯಾಕೆಂದರೆ ಇದೊಂದು ಕಾಲ್ಪನಿಕ ಲೇಖನ.