ಕೋಲ್ಕತ್ತಾ, ಸೆ. 25: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಪೂರ್ಣಪ್ರಮಾಣದ ಕ್ರಿಕೆಟ್ ಆಡಳಿತಗಾರರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷರಾಗಿ ಗಂಗೂಲಿ ಅವರನ್ನು ಆಯ್ಕೆ ಮಾಡಲಾಗಿದೆ. ಬಂಗಾಳ ಕ್ರಿಕೆಟ್ನಲ್ಲಿ ಜಗಮೋಹನ್ ದಾಲ್ಮಿಯಾ ಉತ್ತರಾಧಿಕಾರಿಯಾಗಿ ಗಂಗೂಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸೌರವ್ ಗಂಗೂಲಿ ಆಯ್ಕೆ ಮಾಡುವ ಮೂಲಕ ಪಶ್ಚಿಮ ಬಂಗಾಲ ರಾಜಕೀಯದಲ್ಲಿ ಹೊಸ ಅಲೆ ನಿರ್ಮಿಸುವ ಇರಾದೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ರಾಜ್ಯ ಕ್ರಿಕೆಟ್ ಮುನ್ನಡೆಸಲು ಬೆಂಬಲವನ್ನಷ್ಟೇ ನೀಡಿದ್ದೇನೆ ಎಂದು ಮಮತಾ ಹೇಳಿದ್ದಾರೆ.
ದಾಲ್ಮಿಯಾ ಪುತ್ರ ಅಭಿಷೇಕ್ ಸಿಎಬಿಯ ಜಂಟಿ ಕಾರ್ಯ ದರ್ಶಿಯಾಗಿ ಗಂಗೂಲಿಯಿಂದ ತೆರವಾದ ಸ್ಥಾನವನ್ನು ತುಂಬಿದ್ದಾರೆ. ಸುಬೀರ್ ಗಂಗೂಲಿ ಮತ್ತೋರ್ವ ಜಂಟಿ ಕಾರ್ಯದರ್ಶಿ ಮತ್ತು ಬಿಸ್ವರೂಪ್ ಡೇ ಖಜಾಂಚಿಯಾಗಿ ಮುಂದುವರಿದಿದ್ದಾರೆ.ಸಿಎಬಿ ಮುಂದಿನ ಚುನಾವಣೆ 2016ರ ಜುಲೈನಲ್ಲಿ ನಡೆಯಬೇಕಿದೆ.
ಅಕ್ಟೋಬರ್ 8ರಂದು ದಕ್ಷಿಣ ಆಫ್ರಿಕಾ-ಭಾರತ ಪಂದ್ಯಕ್ಕೆ ಆತಿಥ್ಯ ವಹಿಸಬೇಕಿರುವುದರಿಂದ ನಾನು ಈ ಜವಾಬ್ದಾರಿಯನ್ನು ಕೂಡಲೇ ವಹಿಸಿಕೊಂಡಿದ್ದೇನೆ.
I am thankful to my colleagues for giving me this responsibility: Sourav Ganguly pic.twitter.com/chKaEirM5f
— ANI (@ANI_news) September 24, 2015
ಭಾರತ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಗಂಗೂಲಿ ಅವರು 113 ಟೆಸ್ಟ್, 311 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2003ರಲ್ಲಿ ಭಾರತವನ್ನು ವಿಶ್ವಕಪ್ ಫೈನಲ್ಗೆ ಮುನ್ನಡೆಸಿದ್ದ ಅವರು, ವಿದೇಶದಲ್ಲಿ ಅತ್ಯಧಿಕ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ ನಾಯಕರಾಗಿದ್ದಾರೆ. ಅವರ ನಾಯಕತ್ವದ 49 ಟೆಸ್ಟ್ ಪಂದ್ಯಗಳಲ್ಲಿ ಭಾರತ 21ರಲ್ಲಿ ಗೆದ್ದು 13ರಲ್ಲಿ ಸೋತಿದೆ. ಉಳಿದ 15 ಟೆಸ್ಟ್ ಡ್ರಾಗೊಂಡಿವೆ. 146 ಏಕದಿನ ಪಂದ್ಯಗಳಲ್ಲಿ 76ರಲ್ಲಿ ಗೆದ್ದು 65ರಲ್ಲಿ ಸೋತಿದೆ. 5 ಪಂದ್ಯಗಳು ರದ್ದುಗೊಂಡಿವೆ.